ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಿಸರ್ಗದ ಮಡಿಲಲ್ಲಿ ಪರಿಸರ ಪಾಠ

Suddi Udaya

ಉಜಿರೆ : ಜೀವ ಸಂಕುಲಕ್ಕೆ ಮೂಲಾಧಾರವೇ ಪ್ರಕೃತಿ. ಹಾಗಾಗಿ ಜೀವಶಾಸ್ತ್ರ ಮತ್ತು ಪರಿಸರಶಾಸ್ತ್ರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ‘ವಿಶೇಷ ಜ್ಞಾನವೇ ವಿಜ್ಞಾನ ‘ ಹಾಗಾಗಿ ಪರಿಸರದಿಂದ ವಿಶೇಷವಾಗಿ ನಮ್ಮ ಬುದ್ಧಿಗೆ ನಿಲುಕುವಂತಹ ಜ್ಞಾನವೆಲ್ಲವೂ ವಿಜ್ಞಾನವಾಗಿದೆ. ಆಯುರ್ವೇದ ವಿಜ್ಞಾನಕ್ಕೆ ಮೂಲವೇ ಈ ಪರಿಸರ. ವಿಜ್ಞಾನದ ಕಣ್ಣಿಂದ ಮರೆಯಾದ ಅನೇಕ ನಿಗೂಢ ವಿಚಾರಗಳು ಇನ್ನೂ ನಿಸರ್ಗದಲ್ಲಿ ಅಡಗಿವೆ.


ಎಂದು ಎಸ್.ಡಿ.ಎಮ್ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ..ಪ್ರಸನ್ನಕುಮಾರ ಐತಾಳ್ ಹೇಳಿದರು.

ಅವರು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಉಜಿರೆಯ ಎಸ್.ಡಿ.ಎಮ್ ವೃಕ್ಷಾಲಯದಲ್ಲಿ ಪರಿಸರ ಪಾಠ ಮಾಡಿದರು.

ಈಗಿನ ಕಾಲದ ಜೀವಶಾಸ್ತ್ರ ಮತ್ತು ಸಸ್ಯಶಾಸ್ತ್ರ ವರ್ಗೀಕರಣವನ್ನು ಈ ಹಿಂದೆಯೇ ನಮ್ಮ ಪೂರ್ವಜರು ಗುಣಕ್ಕನುಗುಣವಾಗಿ ವರ್ಗಿಕರಿಸಿದ್ದರು. ಪ್ರಕೃತಿಯು ಮಾನವ ಕುಲಕ್ಕೆ ದೊರೆತ ಅದ್ಭುತ ತಾಣ, ಆದ್ದರಿಂದ ಅದರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ. ಅದಕ್ಕಾಗಿಯೇ ಪರಿಸರದ ಪ್ರಾಮುಖ್ಯತೆ ಅದರ ಪೋಷಣೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಬೇಕು.
ಇಂದು ನಾವು ಪರಿಸರ ರಕ್ಷಣೆಗಾಗಿ ಸರ್ಕಾರ ಹಾಗೂ ನಾವು ಅನೇಕ ನೀತಿಗಳನ್ನು ರೂಪಿಸಿಕೊಂಡಿದ್ದೇವೆ. ನಮ್ಮ ಹಿಂದಿನವರು ಸೂರ್ಯ, ಚಂದ್ರ, ವಾಯು, ಜಲ, ವೃಕ್ಷಗಳಲ್ಲಿ ದೇವರನ್ನು ಕಾಣುವ ಮೂಲಕ ಅದರ ರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಪ್ರಕೃತಿಯನ್ನು ದೇವರಂತೆ ಪೂಜಿಸುವ ಇಂತಹ ಅದ್ಭುತ ಆಚರಣೆಯನ್ನು ಭಾರತ ಬಿಟ್ಟು ಬೇರೆಲ್ಲೂ ನಾವು ಕಾಣಲಿಕ್ಕೆ ಸಾಧ್ಯವಿಲ್ಲ ಎಂದರು.

ದ್ವಿತೀಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ ಅನುರಾಗ ಗೌಡ ಅವರು ವಿದ್ಯಾರ್ಥಿಗಳಿಗೆ ಸಸ್ಯೋದ್ಯಾನದಲ್ಲಿರುವ ಸಸ್ಯ ಸಂಕುಲಗಳ ಪರಿಚಯ ಮಾಡಿಕೊಡುವುದರ ಜೊತೆಗೆ ಅದರ ಅಗತ್ಯತೆಗಳ ಕುರಿತು ಮಾಹಿತಿ ನೀಡಿದರು.

ವಿದ್ಯಾರ್ಥಿನಿ ಅಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Leave a Comment

error: Content is protected !!