ಬೆಳ್ತಂಗಡಿ: ಗಾಳಿ ಮಳೆಗೆ 44 ವಿದ್ಯುತ್ ಕಂಬ ಧರಾಶಾಯಿ: ಅಪಾರ ಹಾನಿ

Suddi Udaya

ಬೆಳ್ತಂಗಡಿ: ತಾಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗಿನ ಜಾವ ಸುರಿದ ಮಳೆ ಹಾಗೂ ಗಾಳಿಯ ಪರಿಣಾಮ 44 ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಒಂದು ವಿದ್ಯುತ್ ಪರಿವರ್ತಕ ಉರುಳಿ ಬಿದ್ದ ಪರಿಣಾಮವಾಗಿ ಮೆಸ್ಕಾಂಗೆ 5 ಲಕ್ಷ ರೂ. ಗಿಂತ ಅಧಿಕ ನಷ್ಟ ಉಂಟಾಗಿದೆ.


ಭಾನುವಾರ ಸಂಜೆಯ ಮಳೆಗೆ ಅಲ್ಲಲ್ಲಿ ಸಾಕಷ್ಟು ಹಾನಿಗಳು ಉಂಟಾಗಿತ್ತು. ಸೋಮವಾರ ಮುಂಜಾನೆ ಸುರಿದ ಮಳೆಗೆ ಮತ್ತೆ ಹಾನಿ ಮುಂದುವರಿಯಿತು.
ಉಜಿರೆ ಮೆಸ್ಕಾಂ ಉಪ ವಿಭಾಗದಲ್ಲಿ 14ಎಚ್‌ ಟಿ ವಿದ್ಯುತ್ ಕಂಬ 10 ಎಲ್ ಟಿ ವಿದ್ಯುತ್ ಕಂಬ ಸೇರಿದಂತೆ ಕಲ್ಮಂಜ ಗ್ರಾಮದಲ್ಲಿ 25 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ನೆಲಕ್ಕುರುಳಿತು.


ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ವ್ಯಾಪ್ತಿಯಲ್ಲಿ 2 ಎಚ್ ಟಿ ಹಾಗೂ 12 ಎಲ್ ಟಿ ಕಂಬಗಳು ಧರಾಶಾಯಿಯಾದವು.
ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಮೈನ್ ಲೈನ್ಸ್ ಸಹಿತ ಅಲ್ಲಲ್ಲಿ ವಿದ್ಯುತ್ ಕಂಬ ತಂತಿಗಳಿಗೆ ಹಾನಿ ಸಂಭವಿಸಿದ ಕಾರಣ ತಾಲೂಕಿನ ಗ್ರಾಮೀಣ ಭಾಗಗಳ ಹೆಚ್ಚಿನ ಕಡೆಗಳಲ್ಲಿ ಸೋಮವಾರ ಸಂಜೆ ತನಕವು ವಿದ್ಯುತ್ ಪೂರೈಕೆಯಾಗಿಲ್ಲ. ಪ್ರಸ್ತುತ ಅನೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಇದ್ದು ವಿದ್ಯುತ್ ಕೈ ಕೊಟ್ಟದ್ದರಿಂದ ಜನರು ಪರದಾಟ ನಡೆಸುವಂತಾಯಿತು. ಮೆಸ್ಕಾಂ ಸಿಬ್ಬಂದಿ ಒಂದೆಡೆ ಕೆಲಸ ಪೂರ್ಣಗೊಳಿಸುವಾಗ ಇನ್ನೊಂದು ಕಡೆಯಿಂದ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ದಿನವಿಡೀ ಕೆಲಸ ನಿರ್ವಹಿಸಿದರು ಎಲ್ಲಾ ಪ್ರದೇಶಗಳಿಗೆ ವಿದ್ಯುತ್ ಪೂರೈಸಲು ಸಾಧ್ಯವಾಗಿಲ್ಲ.ಮೆಸ್ಕಾಂ ಕೆಲವು ಸಿಬ್ಬಂದಿ ರಜೆಯಲ್ಲಿ ತಮ್ಮ ಊರಿಗೆ ತೆರಳಿರುವ ಕಾರಣ ಇರುವ ಸಿಬ್ಬಂದಿ ಕೆಲಸ ನಿರ್ವಹಿಸಿ ಹೈರಾಣರಾದರು.


-ಮನೆಗೆ ಹಾನಿ-
ಕಲ್ಮಂಜ ಗ್ರಾಮದ ಸತ್ಯನಪಲಿಕೆ ಎಂಬಲ್ಲಿ ಸರೋಜಾ ಎಂಬವರ ವಾಸದ ಮನೆ ಮೇಲೆ ಮರ ಬಿದ್ದು ಮೇಲ್ಚಾವಣಿಗೆ ಹಾನಿ ಸಂಭವಿಸಿದೆ.ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೆಕ್ಕಾರು ಗ್ರಾಮದ ಸರಳಿಕಟ್ಟೆ ಮೂಡಡ್ಕ ಎಂಬಲ್ಲಿ ನೂತನ ಮನೆಯೊಂದರ ಮುಂಭಾಗದ ಕಾಂಪೌಂಡ್ ಕುಸಿದು ಬಿದ್ದಿದ್ದು,ವಿದ್ಯುತ್ ಕಂಬವು ಮುರಿದುಬಿದ್ದಿದೆ .


-ಉತ್ತಮ ಮಳೆ –
ಭಾನುವಾರ ಸಂಜೆ ಮಳೆ ಸುರಿದ ಬಳಿಕ, ಸೋಮವಾರ ಬೆಳಗಿನ ಜಾವ ಮೂರು ಗಂಟೆಗೆ ಆರಂಭವಾದ ಸಾಮಾನ್ಯ ಮಳೆ ಬೆಳಗಿನ 8:30ರ ತನಕ ಮುಂದುವರಿಯಿತು ಬಳಿಕ ಮೋಡ ಬಿಸಿಲಿನ ವಾತಾವರಣವಿತ್ತು ಪ್ರಸ್ತುತ ಸುರಿದ ಮಳೆ ಕೃಷಿಕರಿಗೆ ಮುಂದಿನ 4 ದಿನಗಳ ಮಟ್ಟಿಗೆ ಸಮಾಧಾನ ಕೊಟ್ಟಿದೆ.

Leave a Comment

error: Content is protected !!