ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಲನಾ ಸಮಿತಿಯಿಂದ “ಮನಸು “ಅಂತರಾಳದ ಅವಲೋಕನ

Suddi Udaya

ಬೆಳ್ತಂಗಡಿ : ಯುವವಾಹಿನಿ ಬೆಳ್ತಂಗಡಿ ಘಟಕ ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ “ಮನಸು “ಅಂತರಾಳದ ಅವಲೋಕನ ಕಾರ್ಯಕ್ರಮ ಸೆ. 15 ರಂದು ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನ ಬೆಳ್ತಂಗಡಿ ಇಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ರಕ್ಷಾ ರಾಘ್ನೇಶ್ ಉದ್ಯಮಿಗಳು ಅನ್ನಪೂರ್ಣ ಮೆಟಲ್ ಬೆಳ್ತಂಗಡಿ ಇವರು ಮಾತನಾಡುತ್ತಾ ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆಗೆ ಇಂತಹ ಕಾರ್ಯಕ್ರಮ ಅತ್ಯಂತ ಅಗತ್ಯ ಇದೆ, ಯುವ ವಾಹಿನಿ ಇಂತಹ ಹಲವಾರು ಸಮಾಜಮುಖಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ, ಇನ್ನಷ್ಟು ಸಮಾಜಕ್ಕೆ ಯುವ ಜನತೆಗೆ ಉಪಯೋಗವಾಗುವಂತಹ ಕೆಲಸಗಳು ಘಟಕ ಮತ್ತು ಮಹಿಳಾ ಸಂಚಾಲನಾ ಸಮಿತಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕುಮಾರಿ ಹರ್ಷಿತಾ ಎಂ. ವಿ, ಶೈಕ್ಷಣಿಕ ಆಪ್ತ ಸಮಾಲೋಚಕರು ಕೇಂದ್ರೀಯ ವಿದ್ಯಾಲಯ ಉಡುಪಿ, ಇವರು ಮಾಹಿತಿ ನೀಡುತ್ತಾ, ಮಕ್ಕಳು ಮತ್ತು ಮಹಿಳೆಯರ ಮೇಲಾಗಿರುವ ದೌರ್ಜನ್ಯದ ಹಲವಾರು ನೈಜ ಘಟನೆಗಳನ್ನು ತಾನು ನಿರ್ವಹಣೆ ಮಾಡಿರುವ ತನ್ನ ಅನುಭವಗಳನ್ನು ಹಂಚಿಕೊಂಡರು. ಪೋಷಕರು ಮಕ್ಕಳನ್ನು ಅವರ ಮುಂದಿನ ಬದುಕು, ಭವಿಷ್ಯ ಭದ್ರತೆಯಿಂದ ಕೂಡಿರುವಂತೆ ಗಟ್ಟಿಗೊಳಿಸಬೇಕು ತಲೆಯಲ್ಲಿ ಯುಕ್ತಿ, ಮನಸ್ಸಲ್ಲಿ ಭಕ್ತಿ, ತೋಳಿನಲ್ಲಿ ಶಕ್ತಿ ಬೆಳೆಸಿಕೊಳ್ಳುವಂತೆ ಮಕ್ಕಳನ್ನು ನಾವು ಬೆಳೆಸಬೇಕು, ಹಾಗೂ ಸಾಮಾಜಿಕ ಜಾಲತಾಣದ ಒಳಿತು ಕೆಡುಕುಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.

ಸಭಾಧ್ಯಕ್ಷತೆ ವಹಿಸಿದ ಘಟಕದ ಅಧ್ಯಕ್ಷ ಸದಾಶಿವ ಊರ ಮಾತನಾಡುತ್ತಾ ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಯುವ ಜನತೆ ಜಾಗೃತರಾಗಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ವೇದಿಕೆಯಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಮಹಿಳಾ ಸಂಚಾಲನ ಸಮಿತಿಯ ಸಂಚಾಲಕಿ ವನಿತಾ ಜನಾರ್ಧನ್, ಘಟಕದ ಮಹಿಳಾ ನಿರ್ದೇಶಕಿ ಲೀಲಾವತಿ ವಸಂತ ಪೂಜಾರಿ, ಉಪಸ್ಥಿತರಿದ್ದರು.

ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಜಾತ ಅಣ್ಣಿ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಲಹೆಗಾರರಾದ ಸುಧಾಮಣಿ ಸ್ವಾಗತಿಸಿ, ವನಿತಾ ಜನಾರ್ಧನ್ ಧನ್ಯವಾದ ನೀಡಿದರು.

Leave a Comment

error: Content is protected !!