26 ನೇ ವರ್ಷದ ಭಜನಾ ತರಭೇತಿ ಕಮ್ಮಟದ ಸಮಾರೋಪ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿ ಭಾವದ ಭಜನೆಯ ಝೇಂಕಾರ

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 26ನೇ ವರ್ಷದ ಭಜನಾ ತರಭೇತಿ ಕಮ್ಮಟದ ಸಮಾರೋಪ ಸಮಾರಂಭವು ಅಮೃತವರ್ಷಿಣಿ ಸಭಾ ಭವನದಲ್ಲಿ ಸೆ‌ 29 ರಂದು ನಡೆಯಿತು.

26 ಭಜನಾ ಕಮ್ಮಟಗಳಿಂದ 2834 ಭಜನಾ ಮಂಡಳಿಗಳ 5668 ಮಂದಿಗೆ ತರಭೇತಿ ನೀಡಲಾಗಿದೆ.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನಲ್ಲಿ 1750 ಭಜನಾ ಮಂಡಳಿಗಳಿದ್ದು ಒಟ್ಟು 44000 ಸದಸ್ಯರಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಭಜನಾ ಮಂಡಳಿಗಳ ಮೂಲ ಸೌಕರ್ಯದ ಅಭಿವೃದ್ಧಿಗಾಗಿ ರೂ. 2 ಕೋಟಿ ಮೊತ್ತದ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿರುತ್ತಾರೆ.

ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಭಜನೆಯಿಂದ ಅಂತರಂಗ, ಬಹಿರಂಗ ಶುದ್ದಿಯಾಗುತ್ತದೆ. ತರಬೇತಿ ಪಡೆದ ಭಜಕರು ಸಮಾಜಕ್ಕೆ ಆದರ್ಶರಾಗಿರಬೇಕು ಎಂದರು.

ಕುಂದಗೋಳ ಕಲ್ಯಾಣಪುರ ಮಠ ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಬಸವಣ್ಣಜ್ಜನವರು ಸ್ವಾಮೀಜಿ ಪೂಜ್ಯ ಖಾವಂದರ ಅದ್ಬುತ ದೂರದೃಷ್ಟಿಯ ಫಲವಾಗಿ ಈ ಸಮಾಜ ಅಭಿವೃದ್ಧಿ ಹೊಂದಿದೆ.ಪರಿಶುದ್ದ ಮನಸ್ಸಿನಿಂದ ಸಮಾಜ ಕಾರ್ಯಗಳನ್ನು ಮಾಡುತ್ತಿರುವ ಪೂಜ್ಯ ಖಾವಂದರು ಈ ದೇಶದ ಆದರ್ಶ ಎಂದು ಆಶೀರ್ವಚನ ನೀಡಿ. ಮುಂದಿನ ದಿನಗಳಲ್ಲಿ ಡಾ.ಹೆಗ್ಗಡೆಯವರಿಗೆ ಭಾರತ ರತ್ನ ಒಳಿದು ಬರಲಿದೆ ಎಂದರು.

ಮಾಣಿಲ ಕ್ಷೇತ್ರದ ಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಸಾಮಾನ್ಯ ವ್ಯಕ್ತಿ ಭಗವಂತನನ್ನು ತಲುಪಲು ಸುಲಭವಾದ ಮಾರ್ಗ ಭಜನೆ.ಸನಾತನ ನಾಗರೀಕತೆಯನ್ನು ಭಜನೆಯ ಮೂಲಕ ಬಲಪಡಿಸುತ್ತಿರುವ ಡಾ.ಹೆಗ್ಗಡೆಯವರಿಗೆ ವಂದನೆಗಳು ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಭಜನೆಯ ಮೂಲಕ ನಾವೆಲ್ಲರೂ ಒಂದೇ ಎಂಬ ಕಲ್ಪನೆಯನ್ನು ನೀಡಿದ ಈ ನಾಡಿನ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಎಂದರು.

ವೇದಿಕೆಯಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು,ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್,ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್,ಸುರೇಂದ್ರ ಕುಮಾರ್,ಎಸ್.ಡಿ.ಎಂ ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ,
ಯೋಜನೆಯ ಬಿಸಿ ಟ್ರಸ್ಟ್ ನ ಟ್ರಸ್ಟಿ ನಾಗೇಶ್ವರ ರಾವ್,ಡಾ.ಎಲ್.ಹೆಚ್ ಮಂಜುನಾಥ ಉಪಸ್ಥಿತರಿದ್ದರು.

ಮಾತೃಶ್ರೀ ಡಾ.ಹೇಮಾವತಿ ಅಮ್ಮನವರ ಪರಿಕಲ್ಪನೆಯಲ್ಲಿ ವಿದುಷಿ ಚೈತ್ರ ಮತ್ತು ತಂಡದಿಂದ ದೃಶ್ಯ ರೂಪಕ ನಡೆಯಿತು.

ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಭಜನಾ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಪಂಜ ಹಾಗೂ ಹೊಸದಾಗಿ ನೇಮಕಗೊಂಡಿರುವ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್,ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಇವರನ್ನು ಸನ್ಮಾನಿಸಿದರು‌.ಭಜನಾ ಪರಿಷತ್ತಿನ ಮಾದರಿ ಭಜನಾ ಮಂಡಳಿಗಳಿಗೆ ಸಾಧನಾ ಸನ್ಮಾನ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ರಾಮಕೃಷ್ಣ ಕಾಟುಕುಕ್ಕೆ,ಮಂಗಲದಾಸ ಗುಲ್ವಾಡಿ,ಎಂ.ನಾಗೇಶ್ ಶೆಣೈ, ಸೌಮ್ಯ ಸುಭಾಷ್,ಡಾ.ಐ ಶಶಿಕಾಂತ್ ಜೈನ್,ರವಿರಾಜ್ ಉಜಿರೆ,ಸಂದೇಶ್,ನಾಗೇಶ್,ವಿನ್ಯಾಸ್,ಚೈತ್ರ ಇವರನ್ನು ಗೌರವಿಸಲಾಯಿತು.

ಭಜನಾ ಕಮ್ಮಟದ ಅಧ್ಯಕ್ಷ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ವೀರು ಶೆಟ್ಟಿ ವರದಿ ವಾಚಿಸಿದರು.ಭಜನಾ ಕಮ್ಮಟದ ಸದಸ್ಯ ಶ್ರೀನಿವಾಸ್ ರಾವ್ ನಿರೂಪಿಸಿದರು. ಸೌಮ್ಯ ಸುಭಾಷ್ ಮಂಗಲ ಹಾಡು ಹಾಡಿದರು. ಭಜನಾ ಕಮ್ಮಟ ಕೋಶಾಧಿಕಾರಿ ಧನ್ಯ ಕುಮಾರ್ ವಂದಿಸಿದರು.

Leave a Comment

error: Content is protected !!