ಮಚ್ಚಿನ: ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ತಂಭವಾಗಿರುವ ಮತದಾನ ಪ್ರಕ್ರಿಯೆ ಹಾಗೂ ಸಾರ್ವತ್ರಿಕ, ಮುಕ್ತ ಚುನಾವಣೆಯ ವಿವಿಧ ಪ್ರಕ್ರಿಯೆಗಳು, ಅದರ ಮಹತ್ವ ಹಾಗೂ ಚುನಾವಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ, ಹೊಣೆಗಾರಿಕೆಯನ್ನು ತಿಳಿಸಲು ಶಾಲಾ ವಿದ್ಯಾರ್ಥಿ ಸಂಸತ್ತಿಗೆ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಮಾಡುವ ದಿಶೆಯಲ್ಲಿ ಚುನಾವಣೆಯ ವಿವಿಧ ಹಂತಗಳನ್ನು ಮಾಡಿ, ಮನವರಿಕೆ ಮಾಡಲಾಯಿತು.
ಪ್ರತಿವರ್ಷವೂ ವಿನೂತನ ಶೈಕ್ಷಣಿಕ ಚಟುವಟಿಕೆಗಳಿಂದ ತನ್ನದೇ ಆದ ಛಾಪನ್ನು ತಾಲೂಕಿನಲ್ಲಿ ಮೂಡಿಸಿರುವ, ಮಗು ಸ್ನೇಹಿ ಪ್ರೌಢ ಶಾಲೆಯಾಗಿರುವ ಸರಕಾರಿ ಪ್ರೌಢಶಾಲೆ, ಮಚ್ಚಿನ ಇಲ್ಲಿ 2025 – 26ನೇ ಸಾಲಿನ ವಿದ್ಯಾರ್ಥಿ ಸರಕಾರದ ರಚನೆಗೆ ನಡೆದ ಚುನಾವಣೆಯಲ್ಲಿ ಪಿಂಕ್ ( ಸಖೀ ) ಬೂತಿನ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಅರ್ಥೈಸಲು ಅನುಕೂಲವಾಗುವಂತೆ ಶಾಲೆಯ ಮತಗಟ್ಟೆಯನ್ನು ಸಂಪೂರ್ಣ ಗುಲಾಬಿ ಬಣ್ಣದಿಂದ ಅಲಂಕರಿಸಲಾಯಿತು.
ಮಹಿಳಾ ಮತದಾರರಿಗೆ ಮತದಾನದ ಜಾಗೃತಿ ಮೂಡಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಪಿಂಕ್ ( ಸಖೀ) ಮತಗಟ್ಟೆ ಇರುತ್ತದೆ. ಅಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿರುತ್ತಾರೆ ಎಂಬುದನ್ನು ಮನದಟ್ಟು ಮಾಡುವ ದಿಶೆಯಲ್ಲಿ ಈ ಶಾಲೆಯ ಶಿಕ್ಷಕಿಯರು ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಗುಲಾಬಿ ವಸ್ತ್ರ ಧರಿಸಿ, ಮತದಾನದ ಕಾರ್ಯವನ್ನು ನಿರ್ವಹಿಸಿದರು. ಚುನಾವಣೆಯ ಪ್ರಕ್ರಿಯೆಗಳಾದ ಅಧಿಸೂಚನೆ ಹೊರಡಿಸುವುದು, ನಾಮಪತ್ರ ಸಲ್ಲಿಸುವುದು, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂದೆ ತೆಗೆದುಕೊಳ್ಳುವುದು, ಮತ ಪ್ರಚಾರ, ಮತದಾನ ಪ್ರಕ್ರಿಯೆ, ಮತದಾನ ಗೌಪ್ಯತೆ, ಫಲಿತಾಂಶ ಪ್ರಕಟಣೆ, ಪ್ರಮಾಣವಚನ ಮುಂತಾದ ಪ್ರಕ್ರಿಯೆಗಳನ್ನು ನೈಜ ಮತದಾನದ ನಡೆಯುವ ರೀತಿಯಲ್ಲಿ ನಡೆಸಲಾಯಿತು.
ವಿದ್ಯಾರ್ಥಿ ಸಂಸತ್ತಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿ ಕು| ಯಜ್ಞೇಶ್ ಇವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಆಸೀರಾ ಬಾನು ಇವರು ವಿರೋಧ ಪಕ್ಷದ ನಾಯಕಿಯಾದರು. ಮಂತ್ರಿಮಂಡಲದ ಇತರ ಖಾತೆಗಳಿಗೆ ಮಂತ್ರಿಗಳನ್ನು ಆಯ್ಕೆ ಮಾಡಿ, ಪ್ರಮಾಣವಚನ ಬೋಧಿಸಲಾಯಿತು.
ವಿದ್ಯಾರ್ಥಿಗಳಿಗೆ “ಸಖೀಬೂತಿ”ನ ಪರಿಕಲ್ಪನೆ ನೀಡುವ ಉದ್ದೇಶದಿಂದ ನಡೆಸಿದ ಪಿಂಕ್ ಬೂತ್ ಮತದಾನ ಪ್ರಕ್ರಿಯೆಯ ಮಾರ್ಗದರ್ಶನವನ್ನು ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ವೆಂಕಪ್ಪ. ಬಿ ಇವರು ನಿರ್ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಎಸ್ . ಪ್ರಕಾಶ್ ನಾಯ್ಕ್ ರವರು ಸಂಪೂರ್ಣ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳಿಗೆ ಮತದಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ವೀಕ್ಷಕರಾಗಿ ಶಾಲಾ ಎಸ್ .ಡಿ .ಎಂ. ಸಿ ಕಾರ್ಯಾಧ್ಯಕ್ಷರಾದ ಶ್ರೀ ಹೊನ್ನಪ್ಪ ಸಾಲಿಯನ್ ಇವರು ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಶಿವಾಯಿನಿ ಶೇಟ್ , ಲೀನಾ ಸೆರಾವೋ, ಸುಭಾಶ್ಚಂದ್ರ ಪಿ. ಪೂಜಾರಿ, ಸುರೇಶ್ ಎಂ, ದುರ್ಗಪ್ರಸಾದ್ ಜಿ, ವೆಂಕಪ್ಪ ಬಿ., ಅವಿನಾಶ ಹಾಗೂ ವಿ. ಚಂದಪ್ಪ ಪೂಜಾರಿ ಇವರ ಸಹಭಾಗಿತ್ವದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು. ಶ್ರೀಮತಿ ಶೀಲಾ, ಶ್ರೀಮತಿ ಕುಸುಮ, ಶ್ರೀಮತಿ ರೇವತಿ, ಕುಮಾರಿ ತೇಜಸ್ವಿ ಮುಂತಾದವರು ಪಾಲ್ಗೊಂಡರು.