ಧರ್ಮಸ್ಥಳ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಕೋರಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದ್ದ ‘ಕಬ್ಜಾ’ ಶರಣ್ (ಶರಣಪ್ಪ) ಮತ್ತು ಅವರ ತಂಡವನ್ನು, ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ಸ್ಥಳೀಯ ಗ್ರಾಮಸ್ಥರು ಮತ್ತು ಭಕ್ತರು ತಡೆಹಿಡಿದ ಘಟನೆ ಇಂದು ನಡೆದಿದೆ.
ಈ ಸಂದರ್ಭದಲ್ಲಿ ಪಾದಯಾತ್ರಿಗಳು ಮತ್ತು ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ರುದ್ರವಾಡಿ ಗ್ರಾಮದ ಶರಣಪ್ಪ ನೇತೃತ್ವದ ತಂಡವು ‘ಸೌಜನ್ಯಳಿಗೆ ನ್ಯಾಯ’ ಎಂಬ ಧ್ಯೆಯದೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆ ಮುಗಿಸಿ, ತಂಡವು ಧರ್ಮಸ್ಥಳ ಕ್ಷೇತ್ರದ ದ್ವಾರದ ಬಳಿ ಪ್ರವೇಶಿಸಲು ಮುಂದಾದಾಗ, ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯರು ಮತ್ತು ಭಕ್ತರು ಅವರನ್ನು ತಡೆದರು.
ಪಾದಯಾತ್ರೆಯ ಸಂದರ್ಭದಲ್ಲಿ ಶರಣಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ, ಧರ್ಮಸ್ಥಳದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಮತ್ತು ‘ನಕಲಿ ದೇವಮಾನವ’ ಎಂಬ ಪದ ಬಳಸಿ ನಿಂದಿಸಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆ ವೇಳೆ “ತಮ್ಮ ಮೇಲೆ ದಾಳಿಯಾಗುವ ಆತಂಕವಿದೆ. ಯಾರೋ ನನ್ನನ್ನು ಹಿಂಬಾಲಿಸುತ್ತಿದ್ದಾರೆ (ಫಾಲೋ ಮಾಡುತ್ತಿದ್ದಾರೆ)” ಎಂದು ಶರಣಪ್ಪ ಹೇಳಿಕೊಂಡಿದ್ದರು. ಇದನ್ನು ಪ್ರಶ್ನಿಸಿದ ಗ್ರಾಮಸ್ಥರು, “ಯಾರು ನಿಮ್ಮನ್ನು ಹಿಂಬಾಲಿಸಿದ್ದು? ಅವರ ವಾಹನದ ನಂಬರ್ ಕೊಡಿ. ಸುಮ್ಮನೆ ಭಯದ ವಾತಾವರಣ ಸೃಷ್ಟಿಸಬೇಡಿ.” ಎಂದು ಪಟ್ಟುಹಿಡಿದರು. “ನಮ್ಮ ಕ್ಷೇತ್ರದ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಈಗಲೇ ಲೈವ್ ವಿಡಿಯೋ ಮೂಲಕ ಕ್ಷಮೆಯಾಚಿಸಬೇಕು.” ಎಂದು ಆಗ್ರಹಿಸಿದರು. ಸ್ಥಳದಲ್ಲಿ ಪಾದಯಾತ್ರಿಗಳು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ಮುಂದುವರಿದಿದ್ದು. ಗದ್ದಲದ ವಾತಾವರಣ ನಿರ್ಮಾಣವಾಗಿದೆ. ಘಟನೆಯಿಂದಾಗಿ ಧರ್ಮಸ್ಥಳದ ದ್ವಾರದ ಬಳಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು
ಈ ವೇಳೆ, ಧರ್ಮಸ್ಥಳ ಪೊಲೀಸರು ಮಧ್ಯ ಪ್ರವೇಶಿಸಿ ನೆರೆದ ಗುಂಪನ್ನು ಚದುರಿಸಿದರು. ಇದೀಗ ಕಬ್ಜಾ ಶರಣ್ ತಂಡ ಪೊಲೀಸ್ ಠಾಣೆಗೆ ತೆರಳಿದೆ. ಕಬ್ಜಾ ಶರಣ್ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.











