ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ನಾವಿದ್ದೇವೆ. ಹಾಗೂ ಪುಣ್ಯ ಕ್ಷೇತ್ರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ ಎಂಬ ಸಂದೇಶದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ, ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳಿಂದ ಸಮಸ್ತ ಜೈನ ಧರ್ಮೀಯ ಶ್ರಾವಕ ಶ್ರಾವಿಕೆಯರ ಬೃಹತ್ ವಾಹನ ಜಾಥಾ ಆ. 31ರಂದು ಜರುಗಿತು.
ಈ ಜಾಥಾದಲ್ಲಿ ತಾಲೂಕಿನ ಮೂಲೆ ಮೂಲೆಗಳಿಂದ 600ಕ್ಕೂ ಅಧಿಕ ವಾಹನಗಳಿಂದ ಶ್ರಾವಕ, ಶ್ರಾವಿಕೆಯರು ಆಗಮಿಸಿ, ಬೆಳ್ತಂಗಡಿ ಜೈನ ಬಸದಿಯಿಂದಧಮ೯ಸ್ಥಳ ತನಕ ವಾಹನ ಜಾಥಾ ನಡೆಸಿ, ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ನಾವಿದ್ದೇವೆ. ಹಾಗೂ ಪುಣ್ಯ ಕ್ಷೇತ್ರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ ಎಂದು ಸಂದೇಶ ಸಾಿದರು. ಜಾಥಾವು ಬೆಳ್ತಂಗಡಿಯ ಇತಿಹಾಸ ಪ್ರಸಿದ್ಧ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯಿಂದ ಬೆಳಗ್ಗೆ 8:30ಕ್ಕೆ 3 ಬಸದಿಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು.

ವಿಶ್ವದ ಎಲ್ಲಾ ಕಡೆ ಶಾಂತಿ ನೆಲೆಸಿ ಪ್ರತಿಯೊಬ್ಬರ ಬದುಕು ಸುಂದರವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಜಾಥಾ ಮುನ್ನಡೆಸಲಾಯಿತು. ಧಮ೯ಸ್ಥಳ ಮಹಾದ್ವಾರದಿಂದ ದೇವಸ್ಥಾನ ತನಕ ಬೃಹತ್ ಮೆರವಣಿಗೆ ನಡೆಯಿತು. ಬಳಿಕ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಎಷ್ಟೋ ದೂರದವರು ಬಂದರೂ ಕೂಡ ಹತ್ತಿರದವರು ಯಾಕೆ ಬರುತ್ತಿಲ್ಲ ಎಂಬ ಮಾತು ಬರುತ್ತಿತ್ತು ಅದಕ್ಕೆ ನೀವೆಲ್ಲರೂ ಸೇರಿರುವುದು ತುಂಬಾ ಸಂತೋಷವಾಯಿತು.ನಿಮ್ಮೆಲ್ಲರಿಗೂ ನಮ್ಮ ಮೇಲೆ ಪ್ರೀತಿ ಇತ್ತು ಅದನ್ನು ತೋರಿಸುವ ಅವಕಾಶ ಇರಲಿಲ್ಲ, ಆದರೆ ಇಂದು ಅವಕಾಶ ಸಿಕ್ಕಿದೆ. ಸತ್ಯಕ್ಕೆ ಯಾವತ್ತು ಜಯ ಇದೆ ಅದು ಹೊರ ಬರುತ್ತದೆ ಎಂದರು.
ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಅಮಿತ್, ಶ್ರಾದ್ಧ ಅಮಿತ್,ನೀತಾ ರಾಜೇಂದ್ರ ಕುಮಾರ್, , ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು, ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಸ್ವಾಗತಿಸಿ, ನಿರೂಪಿಸಿದರು. ನ್ಯಾಯಾವಾದಿ ಶಶಿಕಿರಣ್ ಜೈನ್ ವಂದಿಸಿದರು,ಬಳಿಕ ಭಗವಾನ್ ಚಂದ್ರ ಸ್ವಾಮಿ ಬಸದಿಯಲ್ಲಿ ಪಂಚ ನಮಸ್ಕಾರ ನೆರವೇರಿಸಲಾಯಿತು.











