ಉಜಿರೆ: ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ನಡೆದ ಜಾಗತಿಕ ಔಷಧಿ ತಜ್ಞರ ಹಾಗೂ ವಾರ್ಷಿಕ ದಿನಾಚರಣೆ ಕಾರ್ಯಕ್ರಮವು ಉಜಿರೆ ಕಾಶಿಬೆಟ್ಟುವಿನ ಅರಳಿ ರಸ್ತೆಯಲ್ಲಿರುವ ರೋಟರಿ ಸೇವಾ ಭವನದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಔಷಧಿ ಆಡಳಿತ ಇಲಾಖೆಯ ಸಹಾಯಕ ಔಷಧಿ ನಿಯಂತ್ರಕ ಶಂಕರ ನಾಯಕ್ ಉದ್ಘಾಟಿಸಿದರು.

ದ.ಕ. ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಔಷಧಿ ಆಡಳಿತ ಇಲಾಖೆಯ ಸಹಾಯಕ ಔಷಧಿ ನಿಯಂತ್ರಕ ಬಾಬು ಬಿ.ಎನ್., ಬೆಳ್ತಂಗಡಿ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಉದಯಕುಮಾರ್ ಜೈನ್, ಕಾರ್ಯದರ್ಶಿ ಪ್ರಕಾಶ್ ಫೆರ್ನಾಂಡೀಸ್, ಶಿರ್ವ ಸೈಂಟ್ ಮೆರಿಸ್ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ರಾಜನ್ ವಿ.ಎನ್., ಪುತ್ತೂರಿನ ಅಲೈಡ್ ಫಾರ್ಮಸಿಯ ಉಪನ್ಯಾಸಕ ರಾಮ ಭಟ್, ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ, ಡಾ.ಎ.ಕೆ. ಜಮಾಲ್ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಗಣಪತಿ ಭಟ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಫಾರ್ಮಸಿಸ್ಟ್ ಗಳಾದ ಗುರುವಾಯನಕೆರೆಯ ಚಂದ್ರಮೆಡಿಕಲ್ಸ್ ನ ವೆಂಕಟ್ರಮಣ ಭಟ್ ಹಾಗೂ ಉಜಿರೆಯ ಗುರುದೇವಿ ಮೆಡಿಕಲ್ಸ್ ನ ಗುರುರಾಜ ಪಡುವೆಟ್ನಾಯ, ಗುರುವಾಯನಕೆರೆಯ ಜನಪ್ರಿಯ ವೈದ್ಯ ವೇಣುಗೋಪಾಲ ಶರ್ಮ ಅವರನ್ನು ಗುರುತಿಸಿ ಗೌರವಿಸಲಾಯಿತು. ಕಳೆದ ಬಾರಿಯ ಅಧ್ಯಕ್ಷ ಶ್ರೀಧರ ಕೆ.ವಿ. ಹಾಗೂ ಕಾರ್ಯದರ್ಶಿ ಮಾಧವ ಗೌಡ ಅವರನ್ನು ಸನ್ಮಾನಿಸಲಾಯಿತು. ಮನೆ ಮನೆಗೆ ತೆರಳಿ ರೋಗಿಗಳಿಗೆ ಶುಶೂಷೆ ನೀಡುತ್ತಿರುವ ಸಮಾಜ ಸೇವಕ, ಕಾರ್ಯದರ್ಶಿ ಪ್ರಕಾಶ್ ಫೆರ್ನಾಂಡೀಸ್ ಅವರನ್ನು ಗುರುತಿಸಿ ಗೌರವಿಸಲಾಯಿತು.
ತಾಲೂಕಿನ 12 ಜನ ದೈಹಿಕ ಅಶಕ್ತರನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವನ್ನು ನೀಡಲಾಯಿತು. ಅಶ್ವಿನಿ ಪ್ರಾರ್ಥಿಸಿ, ಶ್ರೀಧರ ಕೆ.ವಿ. ಸ್ವಾಗತಿಸಿದರು. ಡಾ. ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಸುಜಿತ್ ಭಿಡೆ ವಂದಿಸಿದರು.











