ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾಗಿರುವ ಚಿನ್ನಯ್ಯ ಸೌಜನ್ಯ ಹೋರಾಟಗಾರರ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು. ಈ ದೂರು ನೀಡಲು ಒತ್ತಡ ಹಾಕಿ ನಡೆಸಿರುವ ಅಪರಾಧಿಕ ಪಿತೂರಿಯ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಚಿನ್ನಯ್ಯನಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿ ರಕ್ಷಣೆ ನೀಡುವಂತೆ ಸೌಜನ್ಯ ಪರ ಹೋರಾಟಗಾರ ಜಯಂತ್ ಟಿ ಮುಖ್ಯಮಂತ್ರಿ ಯವರಿಗೆ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಡಿ.20 ರಂದು ಮನವಿ ಮಾಡಿದ್ದಾರೆ.
ಮನವಿಯಲ್ಲಿ ಏನಿದೆ: ಚಿನ್ನಯ್ಯ ಜಾಮೀನಿನ ಮೇಲೆ ಹೊರಬಂದು ಬಳಿಕ ಪೊಲೀಸರಿಗೆ ಸೌಜನ್ಯ ಪರ ಹೋರಾಟಗಾರರಿಂದ ತನಗೆ ಜೀವ ಭಯವಿದೆ ಆದ್ದರಿಂದ ತನಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿಕೊಂಡಿರುವ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದೆ. ಕ್ರೈಂ ನಂ 39/2025ನ ಆರಂಭದ ದಿನಗಳಲ್ಲಿ ಚಿನ್ನಯ್ಯನೊಂದಿಗೆ ಮಾತುಕತೆಯಿದ್ದು ಅದಾದ ಬಳಿಕ ಆತನೊಂದಿಗೆ ಯಾವುದೇ ಸಂಪರ್ಕವಿರುವಯದಿಲ್ಲ.ಸಮೀರ್ ಎಂ.ಡಿ ವಿರುದ್ದ ದೂರು ನೀಡಿ ಪ್ರಕರಣವನ್ನು ಹಿಂದೂ ಮುಸ್ಲಿಂ ಮತೀಯ ವಿಚಾರವಾಗಿ ಪರಿವರ್ತಿಸುವ ಹುನ್ನಾರ ನಡೆಯುತ್ತಿದೆ.
ಅದೇರೀತಿ ಚಿನ್ನಯ್ಯನಿಗೆ ಯಾರಿಂದಲೋ ಅಪಾಯವುಂಟುಮಾಡಿ ಅದನ್ನು ಹೋರಾಟಗಾರರಾದ ನಮ್ಮ ಮೇಲೆ ಹಾಕಿ ಆಮೂಲಕ ಅನ್ಯಾಯವಾಗಿ ನಮ್ಮನ್ನು ಜೈಲಿಗೆ ಕಳುಹಿಸಿ ಸಾಕ್ಷ್ಯಗಳನ್ನು ನಾಶಮಾಡಲು ಹಾಗೂ ಪ್ರಕರಣದ ತನಿಖೆಯನ್ನು ಬೇರೆ ದಿಕ್ಕಿಗೆ ತಿರುಗಿಸಲು ದೊಡ್ಡ ಮಟ್ಟದಲ್ಲಿ ಪಿತೂರಿ ನಡೆಯುತ್ತಿರುವಯದರಿಂದ ದೂರುದಾರ ಚಿನ್ನಯ್ಯನಿಗೆ ಕೂಡಲೇ ಗನ್ ಮ್ಯಾನ್ ಒದಗಿಸಿ ಅವನು ಮತ್ತು ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಎಸ್.ಐ.ಟಿ ತನಿಖೆ ಮುಂದುವರಿಸಬೇಕು.
ಅದೇರೀತಿ ಚಿನ್ನಯ್ಯ ನೀಡಿದ ದೂರಿನ ಉದ್ದೇಶ ಹಾಗೂ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಹಾಗೆಯೇ ದೂರು ನೀಡಲು ಇವರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒತ್ತಡ ಹಾಕಿ ಅಪರಾಧಿಕ ಪಿತೂರಿ ನಡೆಸಿದವರ ಬಗ್ಗೆ ತನಿಖೆ ನಡೆಸಬೇಕು ಎಂದು ಜಯಂತ್ ಟಿ ಮುಖ್ಯಮಂತ್ರಿಯವರಿಗೆ ಹಾಗು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಡಿ.20 ರಂದು ಸಲ್ಲಿಸಿರುವ ಮನವಿಯಲ್ಲಿ ಕೇಳಿಕೊಂಡಿದ್ದಾರೆ.











