ಬೆಳ್ತಂಗಡಿ: ಸೇವಾ ನಿವೃತ್ತಿ ಹೊಂದುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿಯವರಿಗೆ ಗೇರುಕಟ್ಟೆ ಸ.ಪ್ರೌ. ಶಾಲೆ ವತಿಯಿಂದ ಫೆ.28ರಂದು ಗೌರವಾರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಉಪಪ್ರಾಂಶುಪಾಲರಾದ ಈಶ್ವರಿಯವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸರಳತೆ, ಕರ್ತವ್ಯ- ನಿಷ್ಠೆ ಎಲ್ಲರಿಗೂ ಮಾದರಿಯಾಗಿದೆ. ತಮ್ಮ ಸುದೀರ್ಘ ಸೇವಾವಧಿಯಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅವರು ನೀಡಿದ ಕೊಡುಗೆ ಅಪಾರವಾದದ್ದು, ಶಾಲೆಗಳ ಶೈಕ್ಷಣಿಕ ಪ್ರಗತಿ ಮತ್ತು ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಅವರು ಸದಾ ಮಾರ್ಗದರ್ಶನ ನೀಡುತ್ತಿದ್ದರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಫಲಪುಷ್ಪದೊಂದಿಗೆ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅವರು ಶಾಲೆಯ ಪ್ರೀತಿ ಮತ್ತು ಗೌರವಕ್ಕೆ ಮನ ತುಂಬಿ ಕೃತಜ್ಞತೆ ಸಲ್ಲಿಸಿದರು. ಶಿಕ್ಷಣ ಮತ್ತು ಸರಿಯಾದ ಜ್ಞಾನ ನಮ್ಮ ಬದುಕನ್ನು ಕಟ್ಟುವುದು. ವಿದ್ಯಾರ್ಥಿಗಳಲ್ಲಿ ಗುರಿ ಸ್ಪಷ್ಟವಾಗಿರಲಿ ಮತ್ತು ಅದನ್ನು ನಿಷ್ಠೆಯಿಂದ ಸಾಧಿಸುವ ಪ್ರಯತ್ನ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಸಮಾರಂಭದಲ್ಲಿ ಶಾಲೆಯ ಸಹಶಿಕ್ಷಕರು, ಎಸ್ಡಿಎಂಸಿ ಕಾರ್ಯಾಧ್ಯಕ್ಷ ಗೋಪಾಲ ಗೌಡ ಹಾಗೂ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಶಿಕ್ಷಕ ದಿನೇಶ್ ನಿರೂಪಿಸಿ, ವಂದಿಸಿದರು.











