ಉಜಿರೆ : ಇತ್ತೀಚೆಗೆ ಯೂತ್ ಗೇಮ್ಸ್ ಕೌನ್ಸಿಲ್ ಆಫ್ ಇಂಡಿಯಾ (YGCI) ದೆಹಲಿಯ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಓಪನ್ ಯೂತ್ ಗೇಮ್ಸ್ ನಲ್ಲಿ ಭಾಗವಹಿಸಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗು ಎಸ್.ಡಿ.ಎಂ ಕ್ರೀಡಾ ಸಂಘದ ವಿದ್ಯಾರ್ಥಿನಿ ಅನೀಶ ಆರೋಲ್ ಡಿಸೋಜಾ ಗುಂಡೆಸೆತ ಸ್ಪರ್ಧೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಗಿರುವ ಕುಮಾರಿ ಅನೀಶ ಇದೇ ಬರುವ ಮಾರ್ಚ್ 26 ರಿಂದ 30 ರವರೆಗೆ ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೂತ್ ಗೇಮ್ಸ್ ಗೆ ಆಯ್ಕೆಯಾಗಿರುತ್ತಾರೆ. ಉಜಿರೆಯ ಎಸ್.ಡಿ.ಎಂ ಕ್ರೀಡಾ ಸಂಘದ ವಿದ್ಯಾರ್ಥಿನಿ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಅನೀಶ ಇವರು ಇತ್ತೀಚೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಸ್ಕೂಲ್ ಒಲಿಂಪಿಕ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗುಂಡೆಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲೂ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದರು. ಈ ಮೊದಲು ಸುಳ್ಯ ತಾಲೂಕಿನ ಪಂಜ ದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಅತ್ಲೇಟಿಕ್ಸ್ ನಲ್ಲಿ 17 ವಯೋಮಾನದ ಬಾಲಕಿಯರ ಗುಂಡು ಎಸೆತದಲ್ಲಿ ಬೆಳ್ತಂಗಡಿ ತಾಲೂಕಿನ್ನು ಪ್ರತಿನಿಧಿಸಿ ಸುಮಾರು 11.43 ಮೀ ದೂರಕ್ಕೆ ಎಸೆದು ಕೂಟದಲ್ಲೇ ವಿನೂತನ ದಾಖಲೆಯನ್ನು ನಿರ್ಮಿಸಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟೆಯ ಕ್ಲೆಮೆಂಟ್ ಡಿಸೋಜಾ ಮತ್ತು ಆಶಾ ಡಿಸೋಜಾ ದಂಪತಿಗಳ ಮಗಳಾದ ಕುಮಾರಿ ಅನೀಶ ಡಿಸೋಜಾ ಕಳೆದ ಎರಡು ವರ್ಷ ಸತತ ವಾಗಿ ಜಾರ್ಖಂಡ್ ಹಾಗೂ ಲಕ್ನೋ ದಲ್ಲಿ ನಡೆದ ಅಂಡರ್ 14 ವಿಭಾಗದ ರಾಷ್ಟ್ರ ಮಟ್ಟದ ಗುಂಡು ಎಸೆತದಲ್ಲಿ ಭಾಗವಹಿಸಿ 4ನೇ ಸ್ಥಾನವನ್ನು ಪಡೆದಿರುತ್ತಾಳೆ. ಜೊತೆಗೆ ಎರಡು ಭಾರಿ ರಾಜ್ಯ ಮಟ್ಟದ ಚಕ್ರ ಎಸೆತದಲ್ಲಿ ಭಾಗವಹಿಸಿರುತ್ತಾರೆ. ಪ್ರಶಸ್ತಿ ವಿಜೇತ ಕುಮಾರಿ ಅನೀಶರವರಿಗೆ ಉಜಿರೆಯ ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಬಿ ಪೂಂಜ ಹಾಗು ಶಾಲೆಯ ದೈಹಿಕ ಶಿಕ್ಷಕ ಸುಭಾಷ್ ಚಂದ್ರ ತರಬೇತಿ ನಿಡಿರುತ್ತಾರೆ.
ಈ ವಿಶೇಷ ಸಾಧನೆಗೈದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿನಿಗೆ ಎಸ್.ಡಿ.ಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಲಕ್ಷ್ಮಿ, ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಬಿ ಪೂಂಜ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ
‘ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಶಿಸ್ತು, ಸಂಸ್ಕಾರ, ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ರೀಡೆಗೂ ವಿಶೇಷ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುತ್ತಿದೆ. ಈಗಾಗಲೇ ನೂರಾರು ಜನ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಡುವೆ ಇಂದು ಉಜಿರೆಯ ಎಸ್.ಡಿ.ಎಂ ಕನ್ನಡ ಮಾಧ್ಯಮ ಶಾಲೆಯ ಹಾಗು ಎಸ್.ಡಿ.ಎಂ ಕ್ರೀಡಾ ಸಂಘದ ವಿದ್ಯಾರ್ಥಿನಿ ಕುಮಾರಿ ಅನೀಶ ಆರೋಲ್ ಡಿಸೋಜಾ ರಾಷ್ಟ್ರೀಯ ಮಟ್ಟದ ಯೂತ್ ಗೇಮ್ಸ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುವುದರ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ವಿಶೇಷ ಸಾಧನೆ ಮೆರೆದಿದ್ದಾರೆ. ಮುಂದೆ ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೂತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಎಸ್.ಡಿ.ಎಂ ಸಂಸ್ಥೆಯ ಸಾಧನೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ಕ್ರೀಡಾ ಬದುಕು ಯಶಸ್ವಿಯಾಗಲಿ ಎಂದು ಎಸ್.ಡಿ.ಎಂ ಸಂಸ್ಥೆಯ ಸರ್ವ ಸಿಬ್ಬಂದಿಗಳು ಶುಭ ಹಾರೈಸುತ್ತೇವೆ.’ – ಡಾ. ಸತೀಶ್ಚಂದ್ರ ಎಸ್
ಕಾರ್ಯದರ್ಶಿಗಳು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ
ಮಗಳು ಚಿಕ್ಕಮಗಳೂರಿನ ಚಿಕ್ಕ ಹಳ್ಳಿಯಿಂದ ದೆಹಲಿಯನ್ನು ತಲುಪಿ ಇಂದು ಭಾರತವನ್ನು ಪ್ರತಿನಿಧಿಸುವ ಸಲುವಾಗಿ ನೇಪಾಳದತ್ತ ಹೆಜ್ಜೆಹಾಕುತ್ತಿರುವು ನಮ್ಮ ಕುಟುಂಬಕ್ಕೆ ಮಾತ್ರವಲ್ಲದೇ ನಮ್ಮ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿದೆ. ಆಕೆಯ ಈ ಸಾಧನೆ ಉಜಿರೆಯ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಶಾಲೆ ಹಾಗು ಕ್ರೀಡಾ ಸಂಘದಿಂದ ಸಾಧ್ಯವಾಗಿದೆ. ಸಂಸ್ಥೆಯಿಂದ ನಿರಂತರವಾಗಿ ದೊರೆಯುತ್ತಿರುವ ಶಿಕ್ಷಕರ ಪ್ರೋತ್ಸಾಹ, ತರಬೇತುದಾರರ ಮಾರ್ಗದರ್ಶನ, ಆಡಳಿತ ಮಂಡಳಿಯ ಸಹಕಾರಕ್ಕೆ ಕುಟುಂಬ ಸಮೇತರಾಗಿ ನಾವು ಕೃತಜ್ಞತೆಯನ್ನು ತಿಳಿಸುತ್ತೇವೆ. ಮಗಳ ಮುಂದಿನ ಎಲ್ಲಾ ಕ್ರೀಡಾ ಸಾಧನೆಗೂ ಎಸ್.ಡಿ.ಎಂ ಸಂಸ್ಥೆ ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕೆಂದು ಕೋರಿಕೊಳ್ಳುತ್ತೇವೆ. ಅನಿಷಾಳ ಈ ಸಾಧನೆಗೆ ಅಪಾರ ಮೆಚ್ಚುಗೆ ಮತ್ತು ಶುಭಾಶಯಗಳನ್ನು ತಿಳಿಸುತೇವೆ.
– ಆಶಾ ಡಿಸೋಜಾ, ಚಿಕ್ಕಮಗಳೂರು
(ಅನೀಶ ಆರೋಲ್ ತಾಯಿ)












