ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವೂರು ಕೈಕಂಬ-ಹತ್ಯಡ್ಕ-ನಡ ಸಂಪರ್ಕ ರಸ್ತೆಗೆ ಡಾಮರೀಕರಣ ಮತ್ತು ನಾವೂರು ಕೈಕಂಬ ಎಂಬಲ್ಲಿ ಸೇತುವೆ ರಚನೆಗಾಗಿ ಅಗತ್ಯವಿರುವ ಅಂದಾಜು 300.೦೦ಲಕ್ಷ ರೂ.ಗಳ ಅನುದಾನವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ದ.ಕ ಜಿಲ್ಲಾ ಪಂಚಾಯತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಸುದ್ದಿ ಉದಯ ಪತ್ರಿಕೆಯಲ್ಲಿ “ಕುಸಿಯುವ ಮೊದಲು ಹೊಸ ಸೇತುವೆ ನಿರ್ಮಾಣವಾಗುವುದೇ-ಚುನಾವಣೆ ಬಹಿಷ್ಕಾರ ಹಾಕಿದರೂ ಕ್ಯಾರೇ ಅನ್ನದ ಅಧಿಕಾರಿಗಳು” ಎಂಬ ಶಿರೋನಾಮೆಯಲ್ಲಿ ಈ ವಾರ ಪ್ರಕಟಿಸಲಾದ ವರದಿಯನ್ನು ಪರಿಗಣಿಸಿ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಈ ಪತ್ರವನ್ನು ಬರೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವೂರು ಕೈಕಂಬ-ಹತ್ಯಡ್ಕ-ನಡ ಸಂಪರ್ಕ ರಸ್ತೆಗೆ ಡಾಮರೀಕರಣ ಮತ್ತು ನಾವೂರು ಕೈಕಂಬ ಎಂಬಲ್ಲಿ ೧೯೮೧ರಲ್ಲಿ ರಚಿಸಲ್ಪಟ್ಟ ಕಿರುಸೇತುವೆಯು ತೀರಾ ಜೀರ್ಣಾವಸ್ಥೆಯಲ್ಲಿದ್ದು, ಕುಸಿಯುವ ಹಂತದಲ್ಲಿರುವುದರಿಂದ ಸದ್ರಿ ಕಿರುಸೇತುವೆಯ ಬದಲಿಗೆ ಹೊಸ ಸೇತುವೆಯನ್ನು ರಚಿಸುವಂತೆ ಹಲವಾರು ವರ್ಷಗಳಿಂದ ಗ್ರಾಮಸ್ಥರು ಒತ್ತಾಯಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸುವುದಾಗಿ ಸದ್ರಿ ಸ್ಥಳದಲ್ಲಿ ಬ್ಯಾನರ್ ಅಳವಡಿಸಿ ಬೇಡಿಕೆಯನ್ನು ಸಲ್ಲಿಸಿದ್ದರು.
ಆ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಜನರ ಮನವೊಲಿಸಿ ಇಲ್ಲಿಗೆ ಸೇತುವೆ ಮಂಜೂರು ಮಾಡಿಸುವ ಭರವಸೆ ನೀಡಿದ್ದರು. ಬಳಿಕ ಸದ್ರಿ ರಸ್ತೆಗೆ ಡಾಮರೀಕರಣ ಹಾಗೂ ಸೇತುವೆ ರಚನೆ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೆಳ್ತಂಗಡಿಯ ಅಧಿಕಾರಿಗಳು ರೂ. ೩೦೦ ಲಕ್ಷದ ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸಿದ್ದರು. ಆದರೆ ಇದುವರೆಗೂ ಇಲ್ಲಿಗೆ ಅನುದಾನ ಮಂಜೂರುಗೊಂಡಿಲ್ಲ. ಆದ್ದರಿಂದ ಮುಂದಿನ ಚುನಾವಣೆಯನ್ನು ಬಹಿಷ್ಕಾರಿಸುವ ನಿರ್ಧಾರವನ್ನು ಇಲ್ಲಿಯ ಜನರು ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ.
ಇದೀಗ ತಾ.ಪಂ ಕಾರ್ಯನಿರ್ವಾಹಣಾಧಿಕಾರಿಯವರು ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಪತ್ರ ಬರೆದು, ಸದ್ರಿ ಸಂಪರ್ಕ ರಸ್ತೆಯು ಸುಮಾರು ೩೫ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಅನುಕೂಲಕರವಾಗಿದ್ದು, ರಸ್ತೆಯು ತೀರಾ ನಾದುರಸ್ಥಿಯಲ್ಲಿದ್ದು, ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಅಗತ್ಯವಿರುವ ಅಂದಾಜು ೩೦೦.೦೦ಲಕ್ಷ ರೂ.ಗಳ ಅನುದಾನವನ್ನು ಮಂಜೂರು ಮಾಡಲು ಸೂಕ್ತ ಕ್ರಮ ವಹಿಸುವಂತೆ ಪತ್ರದಲ್ಲಿ ವಿನಂತಿಸಿದ್ದಾರೆ.












