ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ರಿ) ಯಲ್ಲಿ ಗ್ರಾಹಕರ ಠೇವಣಿ ಇಟ್ಟಿದ್ದ ಸುಮಾರು 30 ಕೋಟಿ ರೂಪಾಯಿ ಹಣವನ್ನು ವಂಚನೆ ಮಾಡಿದ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಸೊಸೈಟಿಯಲ್ಲಿ ನಡೆಸಿದ ಎರಡು ದಿನದ ಶೋಧ ಕಾರ್ಯಾಚರಣೆ ಅಂತ್ಯ ಮಾಡಿ ದಾಖಲೆ ಪತ್ರಗಳನ್ನು ಮಹಜರು ಮಾಡಿ ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ನಗರದ ರಾಮನಗರದ ವಿ.ಆರ್.ನಾಯಕ್ ಕಾಂಪೌಂಡ್ ನಲ್ಲಿರುವ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಗೆ ಬೆಂಗಳೂರಿನ ಸಿಐಡಿ ಅಧಿಕಾರಿಗಳ ತಂಡ ಮಾ.17 ರಂದು ಬೆಳಗ್ಗೆ 11 ಗಂಟೆಗೆ ಆಗಮಿಸಿ ರಾತ್ರಿ 7:45 ವರೆಗೆ ಶೋಧ ನಡೆಸಿ ಬಳಿಕ ಮಾ.18 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶೋಧ ಕಾರ್ಯಾಚರಣೆ ನಡೆಸಿ ಸೊಸೈಟಿಯಲ್ಲಿ ಗ್ರಾಹಕರಿಗೆ ಮತ್ತು ಸೊಸೈಟಿಗೆ ಸಂಬಂಧಿಸಿದ ಪ್ರಮುಖ ದಾಖಲೆ ಪತ್ರಗಳು , ಕಂಪ್ಯೂಟರಿನ ಮೂರು ಹಾರ್ಡ್ ಡಿಸ್ಕ್, ಎಸ್.ಎಸ್.ಡಿ, ಒಂದು ಸಿಸಿಕ್ಯಾಮಾರದ ಡಿವಿಆರ್,ಸೊಸೈಟಿಯ ಭದ್ರತಾ ಠೇವಣಿ ಇರಿಸಿರುವ 27 ಲಕ್ಷದ ಚೆಕ್, 80 ಗ್ರಾಂ ಚಿನ್ನಾಭರಣಗಳು ಸೇರಿ ಹಲವು ವಸ್ತುಗಳನ್ನು ಸರಕಾರಿ ಪಂಚರುಗಳ ಸಮ್ಮುಖದಲ್ಲಿ ಮಹಜರು ಮಾಡಿ ವಶಪಡಿಸಿಕೊಂಡು ವಾಪಸ್ ತೆರಳಿದ್ದಾರೆ.
ಬೆಂಗಳೂರು ಡೆಪಾಸಿಟ್ ಫ್ರಾಂಡ್ ವಿಂಗ್ ಸಿಐಡಿ ಇನ್ಸ್ಪೆಕ್ಟರ್ ಹರೀಶ್, ಎಎಸ್ಐ ಶಂಕರ್, ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಬ್ಬಂದಿ ಕಿರಣ್, ಶಿವರಾಜ್, ಬೆಳ್ತಂಗಡಿ ಕಂದಾಯ ಇಲಾಖೆಯ ಎಸ್.ಡಿ.ಎ ಪ್ರಜ್ವಲ್, ಗ್ರಾಮ ಆಡಳಿತಾಧಿಕಾರಿ ಸತೀಶ್ , ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಇಲಾಖೆಯ ಸಿಡಿಒ ಎನ್.ಜೆ.ಗೋಪಾಲ್, ದೂರುದಾರ ದಯಾನಂದ್ ನಾಯಕ್, ಸಿಐಡಿ ವಾಹನ ಚಾಲಕ ಸುಂದರ್ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.













