ಬೆಳ್ತಂಗಡಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಕೀರ್ತಿಶೇಷ ಡಾ. ಬಿ. ಯಶೋವರ್ಮ ಮತ್ತು ಕೀರ್ತಿಶೇಷ ಪ್ರೊ. ಎಸ್. ಪ್ರಭಾಕರ್ ರವರಿಗೆ ಅರ್ಪಣೆಯಾಗಲಿರುವ ೫೦೦ ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಮಾ.೨೨ ರಂದು ಸಂಜೆ ೬;೧೫ಕ್ಕೆ ಸರಿಯಾಗಿ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ಕೀರ್ತಿಶೇಷ ಯು. ವಿಜಯರಾಘವ ಪಡುವೆಟ್ನಾಯ ವೇದಿಕೆಯಲ್ಲಿ ನಡೆಯಲಿದೆ.
ಭಾರತೀಯ ಕಲೆ, ಸಂಸ್ಕೃತಿ ಮತ್ತು ಜಾನಪದದ ಭವ್ಯ ಪ್ರದರ್ಶನವನ್ನು ಪಸರಿಸುವ ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ೫೦೦ಮಂದಿ ವಿದ್ಯಾರ್ಥಿ ಕಲಾವಿದರಿಂದ ಯೋಗದೀಪಿಕ, ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮೀ, ಬಡಗುತಿಟ್ಟು ಯಕ್ಷಗಾನ-ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ-ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ-ಹಿರಣ್ಯಾಕ್ಷ ವಧೆ, ಬೊಂಬೆ ವಿನೋದಾವಳಿಗಳು ಸುಮಾರು ಮೂರುವರೇ ಗಂಟೆಗಳ ಕಾಲ ಪ್ರೇಕ್ಷಕರನ್ನು ಮನರಂಜಿಸಲಿವೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಸೇರಿದಂತೆ ೬ ಸಾವಿರ ಜನರು ಭಾಗವಹಿಸಲಿದ್ದಾರೆ.
ಭವ್ಯ ಪರಂಪರೆ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶ:
ಆಳ್ವಾಸ್ ಸಾಂಸ್ಕೃತಿಕ ವೈಭವ ಕೇವಲ ಮನೋರಂಜನೆ ನೀಡುವುದು ಮಾತ್ರವಲ್ಲ, ಜೊತೆಗೆ ಹಲವಾರು ಸಂದೇಶಗಳನ್ನು ನೀಡುವುದು ನಮ್ಮ ಉದ್ದೇಶ. ಶಾಸ್ತ್ರೀಯ, ಜಾನಪದ ಕಲೆಯನ್ನು ಭವ್ಯ ಪರಂಪರೆಯನ್ನು ನಮ್ಮ ಹಿರಿಯರು ನಮಗಾಗಿ ನೀಡಿದ್ದಾರೆ, ಆ ಸಂಪತ್ತನ್ನು ಮುಂದಿನ ಪೀಳಿಗೆಗೂ ತಲುಪಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳ ಮೂಲಕ ಕಲಾ ಪ್ರದರ್ಶನವನ್ನು ನೀಡುತ್ತಿದ್ದೇವೆ. ಉಜಿರೆಯಲ್ಲಿ ನಡೆಯುವ ಸಾಂಸ್ಕೃತಿಕ ವೈಭವವು ನಿಮ್ಮ ಮನ-ಕಣ್ಣುಗಳಿಗಳಿಗೆ ಹಬ್ಬವಾಗಲಿದೆ. -ಡಾ. ಎಂ. ಮೋಹನ್ ಕುಮಾರ್ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ













