ಉಜಿರೆ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ NABH ಪುರಸ್ಕೃತ ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಮೇ 12 ರಂದು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಜಗತ್ತು ಕಂಡ ಅಪ್ರತಿಮ ದಾದಿ ಫ್ಲೋರೆನ್ಸ್ ನೈಟಿಂಗೇಲ್ ಸ್ಮರಣಾರ್ಥ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ಕೆ ಮಾತನಾಡುತ್ತ ದಾದಿಯರ ಸೇವೆ ದೇವರ ಪೂಜೆಗೆ ಸಮಾನ , ದಾದಿಯರು ನಮ್ಮ ಆಸ್ಪತ್ರೆಯ ಆಧಾರ ಸ್ತಂಭಗಳು , ಅವರ ಸೇವೆಗೆ ಬೆಲೆ ಕಟ್ಟುವುದು ಅಸಾದ್ಯ . ನಾವು ವೈದ್ಯರು ರೋಗಿಗಳಿಗೆ ಔಷಧಿ ಮತ್ತು ಶುಶ್ರೂಷೆಯ ಬಗ್ಗೆ ಸಲಹೆ ಸೂಚನೆ ಕೊಡಬಹುದು ಅದನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ದಾದಿಯರದ್ದು , ಅಂತಹ ದಾದಿಯರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಹಾರೈಸಿದರು.
ಪ್ರಾರಂಭದಲ್ಲಿ ಎಲ್ಲ ದಾದಿಯರಿಗೆ ಸಿಸ್ಟೆರ್ ಲಿನ್ಸಿ ಯವರು ಜ್ಯೋತಿಯನ್ನು ಹಸ್ತಾಂತರಿಸಿ ಕರ್ತವ್ಯದ ಪ್ರತಿಜ್ಞಾ ವಿಧಿ ಬೋಧಿಸಿದರು. ಆಸ್ಪತ್ರೆಯ ಸಹಾಯಕ ನರ್ಸಿಂಗ್ ಸುಪರಿಂಟೆಂಡೆಂಟ್ ವಸಂತ ಕುಮಾರಿಯವರು ಈ ದಿನದ ಮಹತ್ವ ಮತ್ತು ಆಚರಣೆಯ ಉದ್ದೇಶಗಳನ್ನು ಕುರಿತು ಮಾಹಿತಿ ನೀಡಿದರು. ಪ್ರಧಾನ ವ್ಯವಸ್ಥಾಪಕ ದೇವಸ್ಯ ವರ್ಗೀಸ್ ದಾದಿಯರು ಅನುಸರಿಸಬೇಕಾದ ಕರ್ತವ್ಯ ಮತ್ತು ರೋಗಿಗಳ ಸೇವೆಯಲ್ಲಿ ಅವರ ಪಾತ್ರದ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಹಿರಿಯ ದಾದಿಯರಾದ ಉಷಾ ಗೌಡ , ನಳಿನಾಕ್ಷಿ ಮತ್ತು ಕೇಶವತಿ ಅವರನ್ನು ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತಿ ದಂಪತಿಗಳಿಂದ ಹಾರಾರ್ಪಣೆ ಮತ್ತು ಶಾಲು ಹೊದಿಸಿ , ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಭಾರತಿ ಜಿ.ಕೆ , ಡಾ. ಆದಿತ್ಯ ರಾವ್ , ಡಾ. ಅಂಕಿತ ಜಿ ಭಟ್ , ಡಾ. ಶ್ರೇಯಸ್ ಮುಂತಾದವರು ಉಪಸ್ಥಿತರಿದ್ದರು. ಸಿಸ್ಟೆರ್ ಮಿಥ್ಯಶ್ರೀ ಧನ್ಯವಾದ ಸಮರ್ಪಿಸಿದರು.













