ಲಾಯಿಲ: ಕಪುಚಿನ್ ಕೃಷಿಕಾ ಸೇವಾ ಕೇಂದ್ರ ಮತ್ತು ವಿಮುಕ್ತಿ ಸ್ವ ಸಹಾಯ ಸಂಘಗಳ ವತಿಯಿಂದ 7ನೇ ವರ್ಷದ ವಿದ್ಯಾಸ್ನೇಹಿ ಬಡ್ಡಿರಹಿತ ಶಿಕ್ಷಣ ಸಾಲ ವಿತರಣಾ ಕಾರ್ಯಕ್ರಮವು ಜು.5 ರಂದು ವಿಮುಕ್ತಿ ಸಭಾಭವನದಲ್ಲಿ ನಡೆಯಿತು.
ಸಂಸ್ಥೆಯ ನಿರ್ದೇಶಕರಾದ ಫಾ.ವಿನೋದ್ ಮಸ್ಕರೇನಸ್ರವರು ಸಂವಿಧಾನದ ಪುಸ್ತಕಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಳೆದ 7 ವರ್ಷಗಳ ವಿದ್ಯಾಸ್ನೇಹಿಯ ಪಯಣದ ಹಾದಿಯನ್ನು ಸಹ ನಿರ್ದೇಶಕರಾದ ಫಾ ರೋಹನ್ ಲೋಬೋರವರು ವಿವರಿಸಿದರು. ಸಂಸ್ಥೆಯ ನಿರ್ದೇಶಕರು ವಿದ್ಯಾರ್ಥಿಗಳಿಗೆ ಸಮುದಾಯದ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮುದಾಯದಲ್ಲಿರುವ ಅಸಹಾಯಕ ಹಾಗೂ ಬಡ ಜನರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸುತ್ತಾ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಾಲಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು ಹಾಗೂ ಉಪಾಧ್ಯಕ್ಷೆ ಶಶಿಕಲಾ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಒಟ್ಟು 31 ವಿದ್ಯಾರ್ಥಿಗಳಿಗೆ ಸುಮಾರು 8,91,000 ರೂಪಾಯಿಗಳ ಶೈಕ್ಷಣಿಕ ಬಡ್ಡಿರಹಿತ ಸಾಲದ ಮೊತ್ತವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ನಿರ್ದೇಶಕರಾದ ಫಾ ರೋಹನ್ ಲೋಬೋ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ಮೋಹಿನಿಯವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.














