ಲಾಯಿಲ: ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಲಾಯಿಲ ವತಿಯಿಂದ ಹಾಗೂ ವಡೋದರದ ವಾಸು ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸುಶ್ರುತ ಜಯಂತಿಯ ಅಂಗವಾಗಿ ಅಗ್ನಿಕರ್ಮ ಆಧಾರಿತ ನೋವು ನಿವಾರಕ ಕಾರ್ಯಾಗಾರವನ್ನು ಜು.17ರಂದು ಆಯೋಜಿಸಲಾಯಿತು.
ಆಯುರ್ವೇದದ ವಿಶಿಷ್ಟ ಅನುಶಸ್ತ್ರ ಚಿಕಿತ್ಸೆಗಳಲ್ಲೊಂದಾದ ಅಗ್ನಿಕರ್ಮದ ಮೂಲಕ ವಿವಿಧ ರೀತಿಯ ಕೀಲುನೋವು, ಸ್ನಾಯುನೋವು, ಕುತ್ತಿಗೆ ಹಾಗೂ ಬೆನ್ನುನೋವು ಸೇರಿದಂತೆ ದೀರ್ಘಕಾಲದ ನೋವಿನ ಸಮಸ್ಯೆಗಳಿಗೆ ಚಿಕಿತ್ಸೆ ಹಾಗೂ ತಜ್ಞರ ಸಲಹೆಯನ್ನು ಕಾರ್ಯಾಗಾರದಲ್ಲಿ ನೀಡಲಾಯಿತು. ನೂರಕ್ಕೂ ಹೆಚ್ಚು ರೋಗಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದು ಇದರ ಸದುಪಯೋಗವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಪ್ರಸನ್ನ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಬಿ.ಕೆ., ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ. ರವಿಶಂಕರ್, ಶಲ್ಯತಂತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಸುಪ್ರೀತ್ ಲೋಬೊ, ಡಾ. ವೀಣಾ ಹಾಗೂ ಡಾ. ಲಿಯಾ ಉಪಸ್ಥಿತರಿದ್ದು, ರೋಗಿಗಳಿಗೆ ಅಗ್ನಿಕರ್ಮ ಚಿಕಿತ್ಸೆಯ ಮಹತ್ವ, ಅದರ ಉಪಯೋಗಗಳು ಹಾಗೂ ಆಯುರ್ವೇದದಲ್ಲಿ ನೋವು ನಿವಾರಣೆಯಲ್ಲಿ ಅದರ ಪರಿಣಾಮಕಾರಿತ್ವದ ಕುರಿತು ಮಾಹಿತಿ ನೀಡಿದರು.
ವಾಸು ಕಂಪನಿಯ ಪ್ರತಿನಿಧಿ ಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ ನೀಡಿದರು. ಸುಮಾರು 120ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಚಿಕಿತ್ಸೆಯನ್ನು ಪಡೆದರು.















