ಮುಂಡಾಜೆ: ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡು ಕಾರ್ಗಿಲ್ ಸಮರದ ಹುತಾತ್ಮ ಯೋಧರ ಹೆಸರಿನಲ್ಲಿ ಬೆಳೆಯುತ್ತಿರುವ ಎಂಟುನೂರಕ್ಕೂ ಹೆಚ್ಚು ಗಿಡಗಳ ಮುಂಡಾಜೆಯ ಕಾರ್ಗಿಲ್ ವನದಲ್ಲಿ ಇಪ್ಪತ್ತೇಳನೇ ವರ್ಷದ ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಕಮಾಂಡರ್ ಶಾಂತಿಲಾಲ್ ಜಟಿಯಾ ಹಾಗೂ ತಂಡ ಆಗಮಿಸಿ ಕಾರ್ಗಿಲ್ ವನದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಗಿಲ್ ವೀರ ನಿವೃತ್ತ ಕರ್ನಲ್ ನಿತಿನ್ ಭಿಡೆಯವರು ಭಾರತೀಯರಾದ ನಾವೆಲ್ಲರೂ ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಾಗ ಗಡಿಯಲ್ಲಿ ಕಾರ್ಯಾಚರಿಸುವ ಯೋಧರ ಕರ್ತವ್ಯ ಹಾಗೂ ಬಲಿದಾನಕ್ಕೆ ನಿಜವಾದ ಗೌರವ ದೊರಕುತ್ತದೆ ಎಂದರು.

ಹುತಾತ್ಮ ಯೋಧರ ಗೌರವಾರ್ಥ ಮೂರು ನಿಮಿಷಗಳ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು.
ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್ ಹಾಗೂ ಭಾರತೀಯ ನೌಕದಳದ ನಿವೃತ್ತಸೇನಾನಿ ಕೃಷ್ಣ ಭಟ್ ಕದಂಬ ವೃಕ್ಷಗಳನ್ನು ನೆಟ್ಟು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಊರ ಹಿರಿಯರಾದ ರಾಮಚಂದ್ರ ಭಟ್ ಅರೆಕಲ್ , ಶಶಿಧರ ಖಾಡಿಲ್ಕಾರ್ , ಸುನಿಲ್ ಭಿಡೆ, ಯೋಗೀಶ್ ಭಿಡೆ, ಹಿರಿಯ ವರ್ತಕರಾದ ಪ್ರಹ್ಲಾದ ಫಡ್ಕೆ ದಂಪತಿಗಳು ,ಮುಂಡಾಜೆ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವಾಸುದೇವ ಗೋಖಲೆ ,ಮುಂಡಾಜೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಶ್ರೀಮತಿ ಸುಮನಾ ಗೋಖಲೆ,ಪತ್ರಿಕಾ ವಿತರಕರಾದ ಬಾಲಚಂದ್ರ ನಾಯಕ್, ಪ್ರಗತಿಪರ ಕೃಷಿಕರಾದ ಶಿವಣ್ಣ , ಅವಿನಾಶ್ ಭಿಡೆ ದಂಪತಿಗಳು ಅರಸಿನಮಕ್ಕಿ , ರಮೇಶ ಹಾಗೂ ನಿತಿನ್ ಬೈರಕಟ್ಟ ಉಪಸ್ಥಿತರಿದ್ದರು.
ಕಾರ್ಗಿಲ್ ವನದ ರೂವಾರಿಗಳಾದ ಶ್ರೀಮತಿ ಲತಾ ಜಿ .ಭಿಡೆ ಹಾಗೂ ಪುತ್ರ ಸಚಿನ್ ಭಿಡೆ ಸ್ವಾಗತಿಸಿ ,ಧನ್ಯವಾದವಿತ್ತರು.
















