ಕೊಯ್ಯೂರು: “ಆಟಿ ತಿಂಗಳಲ್ಲಿ ನಾವು ಆಡುವ ಚೆನ್ನೆಮಣೆ ಆಟದಲ್ಲಿ ಜೀವನದ ಪಾಠ ಇದೆ. ಜೀವನದ ಪ್ರತಿಯೊಂದು ಮಜಲುಗಳನ್ನು ಚೆನ್ನೆಮಣೆ ಆಟಕ್ಕೆ ಹೋಲಿಸಬಹುದು”ಎಂದು ಶ್ರೀ ಧ. ಮಂ. ತಾಂತ್ರಿಕ ಕಾಲೇಜ್ ನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ರವೀಶ್ ಪಡುಮಲೆ ಅಭಿಪ್ರಾಯಪಟ್ಟರು.
ಅವರು ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಹಿರಿಯರು ಆಟಿ ತಿಂಗಳಿನಲ್ಲಿ ನಡೆಸಿಕೊಂಡು ಬರುತ್ತಿದ್ದ ಕಟ್ಟಳೆಗಳು ಇಂದು ಸಂಸ್ಕೃತಿಯ ರೂಪವನ್ನು ಪಡೆದುಕೊಂಡಿದೆ. ಭಾರತೀಯ ಸಂಸ್ಕೃತಿಯಲ್ಲಿ ಅಪ್ಪ, ಅಮ್ಮ, ಗುರುಗಳಿಗೆ ಸಮರ್ಪಕವಾದ ಗೌರವ ನೀಡುವುದರೊಂದಿಗೆ ಯುವಪೀಳಿಗೆ ಸರಿಯಾದ ದಾರಿಯಲ್ಲಿ ಕ್ರಮಿಸಿ ದೇಶ ಕಟ್ಟುವ ಕೆಲಸ ಮಾಡಬೇಕು ” ಎಂದು ಕಿವಿಮಾತು ಹೇಳಿದರು.
ವೆಂಕಣ್ಣ ಕೊಯ್ಯೂರು- ರವರು ನಮ್ಮ ಹಿರಿಯರ ಆಟಿ ತಿಂಗಳ ಕಷ್ಟದ ಜೀವನದ ಬಗ್ಗೆ ವಿಶ್ಲೇಷಿಸುತ್ತಾ ವಿದ್ಯಾರ್ಥಿಗಳು ಈ ಬಗ್ಗೆ ಅರಿತು ಬಾಳಬೇಕು ಎಂಬುದಾಗಿ ತಿಳಿಸಿದರು. ಖ್ಯಾತ ಪ್ರಾಚ್ಯವಸ್ತು ಸಂಗ್ರಹಕಾರರಾದ ಹಳ್ಳಿಮನೆ ಹೈದರಾಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಕೆಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಮತ್ತು ಕೊಯ್ಯೂರು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿದರು. ಪ್ರಾಚಾರ್ಯರಾದ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಜಾನಪದ ಕ್ಷೇತ್ರದ ಶ್ರೇಷ್ಠ ಸಾಧನೆಗಾಗಿ ರವೀಶ್ ಪಡುಮಲೆ ಮತ್ತು ವೇದಿಕೆ ತಯಾರಿಗಾಗಿ ಸುರೇಶ್ ಬಂದಾರು ಅವರನ್ನು ಕಾಲೇಜು ವತಿಯಿಂದ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಾದ ಯಜ್ಞಶ್ರೀ, ದಿವ್ಯ, ಕೃಪಾ, ರಶ್ಮಿತ, ಪ್ರಜ್ಞಾ -ಇವರುಗಳ ಪ್ರಾರ್ಥನೆಯೊಂದಿಗ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಇತಿಹಾಸ ಉಪನ್ಯಾಸಕ ಲಕ್ಷ್ಮಣ ಗೌಡ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಯಶೋಧ ಅತಿಥಿಗಳ ಪರಿಚಯ ಗೈದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಭವ್ಯ ವಂದಿಸಿದರು. ಉಪನ್ಯಾಸಕರಾದ ರಶ್ಮಿ ದೇವಿ, ಸಂತೋಷ್ ಕುಮಾರ್, ಮಾಯಿಲ, ಕುಮಾರಿ ಹರ್ಷಿಣಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರ್ವಹಣೆಗೈದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ ಆಟಿ ತಿಂಡಿ -ತಿನಿಸುಗಳ ಪ್ರಾತ್ಯಕ್ಷತೆಯೊಂದಿಗೆ ಸಹಭೋಜನ ಗೈಯಲಾಯಿತು.













