
ಬೆಳ್ತಂಗಡಿ: ಪ್ರಯತ್ನಕ್ಕೆ ಪ್ರತಿಫಲ, ಸಾಧನೆಗೆ ಸನ್ಮಾನ ಎಂಬ ಸಂದೇಶ ಸಾರುವಂತೆ ಲಾಯಿಲದ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್ಸಿ 2025–26ನೇ ಸಾಲಿನ ಶೈಕ್ಷಣಿಕ ಸಾಧಕರ ಅಭಿನಂದನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಪೂಜ್ಯ ಮಾಣಿ ವೆಳುತೇಡತುಪರಂಬಿಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 622 ಅಂಕಗಳನ್ನು ಗಳಿಸಿದ ಮಾಸ್ಟರ್ ಚಿರಾಗ್ ನಾಯಕ್ ಹಾಗೂ ಮಾಸ್ಟರ್ ವಿ., ತನುಷ್ ರೈ ಅವರು ಶಾಲೆಗೆ ಪ್ರಥಮ, ರಾಜ್ಯಕ್ಕೆ 4ನೇ, ಜಿಲ್ಲೆಗೆ 2ನೇ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 613 ಅಂಕಗಳನ್ನು ಗಳಿಸಿದ ಲಿನ್ ಮರಿಯಾ ಹಾಗೂ ಮನಸ್ವಿ ಎಂ.ಕೆ. ಅವರು ರಾಜ್ಯಕ್ಕೆ 7ನೇ ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಸನ್ಮಾನಿಸಲಾಯಿತು. ಅದೇ ರೀತಿ ಎ+, ಎ, ಬಿ+ ಹಾಗೂ ಬಿ ಶ್ರೇಣಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಶ್ರಮಿಸಿದ ಶಿಕ್ಷಕ ವೃಂದವನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಮಾಣಿ ವೆಳುತೇಡತುಪರಂಬಿಲ್ ಮಾತನಾಡಿ ಭಾರತದ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರೆವ. ಸಿಸ್ಟರ್ ಪ್ರೀತಿ ಜಾರ್ಜ್, ಶಾಲಾ ಸಂಚಾಲಕಿ ರೆವ. ಸಿಸ್ಟರ್ ಎಲ್ಸಿ ಪಾಲೆಟ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರೆಜಿ ಜಾರ್ಜ್, ಶಾಲಾ ಸಿಬ್ಬಂದಿ ಕಾರ್ಯದರ್ಶಿ ಲಾವಣ್ಯ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಸಹ ಶಿಕ್ಷಕಿಯರಾದ ಮಮತಾ ಹಾಗೂ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ರೆವ. ಸಿಸ್ಟರ್ ಪ್ರೀತಿ ಜಾರ್ಜ್ ಸ್ವಾಗತಿಸಿದರು. ಸಹ ಶಿಕ್ಷಕಿ ಅನಿತಾ ವಂದಿಸಿದರು. ಸೈಂಟ್ ಮೇರಿಸ್ ಶಾಲೆಯ ಈ ಶೈಕ್ಷಣಿಕ ಸಾಧನೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕ ವೃಂದದ ಪರಿಶ್ರಮಕ್ಕೆ ಸಾಕ್ಷಿಯಾಗಿದ್ದು, ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಭಿನಂದನೆ ಸಲ್ಲಿಸಲಾಯಿತು.












