ಬೆಳ್ತಂಗಡಿ: ಲವ್ ಕಾಕ್ಟೈಲ್, ಅಪ್ಪೆ ಟೀಚರ್, ಮಾಲ್ಗುಡಿ ಡೇಸ್, ಹೌದ್ದೋ ಹುಲಿಯ ಸೇರಿದಂತೆ ವಿಭಿನ್ನ ಕಥೆಗಳು ಹಾಗೂ ಮನರಂಜನೆಯ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿರುವ ಸ್ವಯಂಪ್ರಭ ಎಂಟರ್ಟೈನ್ಮೆಂಟ್ & ಪ್ರೋಡಕ್ಷನ್ ಸಂಸ್ಥೆಯಿಂದ ಇದೀಗ ಮತ್ತೊಂದು ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು ವಿಭಿನ್ನ ಕಥಾಹಂದರ ಹಾಗೂ ಹಾಸ್ಯ ಮನರಂಜನೆಯೊಂದಿಗೆ ಮೂಡಿಬರುತ್ತಿರುವ ಹೊಸ ಚಿತ್ರವೇ ‘ಅಜ್ಜಿಕಥೆ’.
ಇಂದು ದುಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ‘ಅಜ್ಜಿಕಥೆ’ ಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಶೀರ್ಷಿಕೆ ಅನಾವರಣದೊಂದಿಗೆ ಚಿತ್ರದ ಬಗ್ಗೆ ಕುತೂಹಲವೂ ಹೆಚ್ಚಾಗಿದೆ.

‘ದಸ್ಕತ್’ ಚಿತ್ರದ ನಿರ್ದೇಶಕರಾದ ಅನೀಶ್ ಪೂಜಾರಿ ವೇಣೂರು ಅವರ ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ‘ಅಜ್ಜಿಕಥೆ’ ಸಿನಿಮಾ ಮೂಡಿಬರುತ್ತಿದೆ. ಸ್ವಯಂಪ್ರಭ ಎಂಟರ್ಟೈನ್ಮೆಂಟ್ & ಪ್ರೋಡಕ್ಷನ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರಕ್ಕೆ ಕೆ. ರತ್ನಾಕರ್ ಕಾಮತ್ ಹಾಗೂ ಗಣೇಶ್ ಆರ್ ಕಾಮತ್ ಕೆ. ನಿರ್ಮಾಪಕರಾಗಿದ್ದು, ನಮಃ ಪ್ರೋಡಕ್ಷನ್ಸ್ ನ ವಿನೋದ್ ಶೆಟ್ಟಿ ಹಾಗೂ ವಿಕ್ಕಿ ಮಹೇಶ್ ತಕ್ಕರ್ ರವರು ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ.
ಚಿತ್ರದ ಕಥೆಯನ್ನು ಸಂತೋಷ್ ಆಚಾರ್ಯ ಗುಂಪಲಾಜೆ ಬರೆದಿದ್ದು, ಸಂಭಾಷಣೆಯನ್ನು ನಿಶಿತ್ ಶೆಟ್ಟಿ ಹಾಗೂ ಪ್ರವೀಣ್ ಜೈನ್ ರಚಿಸಿದ್ದಾರೆ. ಛಾಯಾಗ್ರಹಣವನ್ನು ಸಂತೋಷ್ ಆಚಾರ್ಯ ಗುಂಪಲಾಜೆ ಹಾಗೂ ದೀಕ್ಷಿತ್ ಧರ್ಮಸ್ಥಳ ನಿರ್ವಹಿಸಲಿದ್ದಾರೆ. ಶಿವರಾಜ್ ಕುತ್ತೆತೂರು ಸಂಕಲನ ಹಾಗೂ ಸಮರ್ಥನ್ ಎಸ್. ರಾವ್ ಸಂಗೀತದ ಹೊಣೆ ಹೊತ್ತಿದ್ದಾರೆ. ಚಿತ್ರದಲ್ಲಿ ಹಿರಿಯ ಕಲಾವಿದೆ 84 ವರ್ಷದ ರಾಮಕ್ಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಪ್ರವೀಣ್ ಜೈನ್, ಹಿತೇಶ್ ಕಾಪಿನಡ್ಕ, ಮನೀಶ್ ಶೆಟ್ಟಿ ಹಾಗೂ ಸೂರಜ್ ಕುಮಾರ್ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ.
ಇನ್ನು ಚಿತ್ರದ ನಾಯಕನಾಗಿ ಗೌತಮ್ ಬಂಗೇರ ದುಬೈ ಮತ್ತು ನಾಯಕಿಯಾಗಿ ಸಿಂಚನ ಪಿ. ರಾವ್ ಅಭಿನಯಿಸುತ್ತಿದ್ದಾರೆ. ಮನೋಜ್ ಚೇತನ್ ಡಿಸೋಜ ಮಸ್ಕತ್, ಪರ್ಲ್ ರೊಸಾರಿಯೋ ದುಬೈ, ಸುದರ್ಶನ್ ಹೆಗ್ಡೆ ದುಬೈ, ಪುನೀತ್ ಸಾಲ್ಯಾನ್ ದುಬೈ, ದೀಕ್ಷಿತ್ ಕೆ. ಅಂಡಿಂಜೆ, ಭಗವಾನ್, ಚಿತ್ರಾ ಭಗವಾನ್, ಅಕ್ಷಯ್ ಸರಿಪಲ್ಲ, ಚಂದ್ರಶೇಖರ್, ಸುರೇಶ್ ಸುವರ್ಣ ರಾಯಿ, ಉಷಾ, ನವೀನ್ ಬೊಂದೆಲ್ ಹಾಗೂ ಸಾಯಿ ಚೇತನ್ ಸೇರಿದಂತೆ ಬಹು ತಾರಾಗಣ ಚಿತ್ರದಲ್ಲಿದೆ.‘ಅಜ್ಜಿಕಥೆ’ ಎಂಬ ಶೀರ್ಷಿಕೆಯೇ ಚಿತ್ರದ ಕಥೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದ್ದು ಕುಟುಂಬ ಸಂಬಂಧಗಳು, ಹಾಸ್ಯ, ಹಾಗೂ ಕರಾವಳಿಯ ಬದುಕಿನ ಸೊಗಡನ್ನು ಒಳಗೊಂಡಿರುವ ಈ ಚಿತ್ರವು ಪ್ರೇಕ್ಷಕರಿಗೆ ವಿಭಿನ್ನ ಮನರಂಜನೆಯ ಅನುಭವ ನೀಡುವ ನಿರೀಕ್ಷೆಯಿದೆ.












