ಬೆಳ್ತಂಗಡಿ: ಸಂಸ್ಕೃತ ಎನ್ನುವುದು ಸಂಸ್ಕಾರ ಮಾಡಲ್ಪಟ್ಟ ಭಾಷೆ ಅಥವಾ ಸಂಸ್ಕರಿಸಿದ ಭಾಷೆ. ಸಂಸ್ಕೃತದ ಪ್ರತಿಯೊಂದು ಅಕ್ಷರಗಳಿಗೂ ಕೂಡ ಮಹತ್ತ್ವವಿದೆ. ವರ್ಣಮಾಲೆಯ ಅಕ್ಷರಗಳನ್ನು ಮಾತೃಕೆಗಳು ಎಂದು ಕರೆಯುತ್ತಾರೆ. ಪ್ರತಿ ಅಕ್ಷರಕ್ಕೂ ತನ್ನದೇ ಆದ ಶಕ್ತಿ ಮತ್ತು ದೈವಿಕ ಹಿನ್ನೆಲೆ ಇದೆ. ಮಾತೃಕೆಗಳು ದೇವತೋಪಾಸನೆಯಲ್ಲಿ ಮಹತ್ತ್ವದ ಸ್ಥಾನವನ್ನು ಹೊಂದಿವೆ. ವೇದಗಳಿಂದ ಹಿಡಿದು ಇಲ್ಲಿಯವರೆಗೆ ಸಂಸ್ಕೃತದ ಸಾಹಿತ್ಯ ಅಗಾಧವಾಗಿದೆ. ವೇದಗಳು , ಪುರಾಣಗಳು , ರಾಮಾಯಣ , ಮಹಾಭಾರತ ಇವುಗಳನ್ನು ಪದೇ ಪದೇ ಅಧ್ಯಯನ ಮಾಡಿದರೆ ಹೊಸ ಹೊಸ ಹೊಳವುಗಳು ಕಾಣಸಿಗುತ್ತವೆ. ಹಾಗೆಯೇ ಸಂಸ್ಕೃತ ಭಾಷೆಯಲ್ಲಿ ಅನೇಕ ವೈಜ್ಞಾನಿಕ ಅಂಶಗಳಿರುವುದನ್ನು ಕಾಣುತ್ತೇವೆ. ಮೆದುಳಿನ ಕೋಶಗಳ ಅಗಾಧ ಶಕ್ತಿಯ ಅನುಭವ ಸಂಸ್ಕೃತ ಭಾಷೆಯ ಅಧ್ಯಯನದಿಂದ ಸಾಧ್ಯವಾಗುತ್ತಿದೆ . ಒಟ್ಟಾರೆ ಸಂಸ್ಕೃತ ಭಾಷೆಯೇ ದೇವರ ಸೃಷ್ಟಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಅರ್ಚಕರಾದ ಡಾ. ಸಂತೋಷ ಕಲ್ಲೂರಾಯ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಂಸ್ಕೃತ ದಿನಾಚರಣೆ ಹಾಗೂ ಸಂಸ್ಕೃತ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಮಾತನಾಡಿ ವಿದ್ಯಾರ್ಥಿಗಳು ಸಂಸ್ಕೃತದ ಅಧ್ಯಯನ ಮಾಡಿದರೆ ಸಂಸ್ಕೃತ ಭಾಷೆಯ ಹಾಗೂ ಸಾಹಿತ್ಯದ ಅಗಾಧತೆಯ ಮನವರಿಕೆಯಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ. ಸಂತೋಷ ಕಲ್ಲೂರಾಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮನ್ವಿತಾ ಹಾಗೂ ಅಹಲ್ಯಾ ಬೆಂಡೆ ಇವರಿಂದ ಸಂಸ್ಕೃತ ಗೀತಗಾಯನ ನಡೆಯಿತು.
ಕವನ ಎಸ್ ಭಟ್ , ಪಲ್ಲವಿ ಜೆ ಗಾಣಿಗ, ಹರಿಣಿ ಎಸ್ ಭಟ್, ಶರ್ವಾಣಿ ಬೆಡೇಕರ್ ಪ್ರಾರ್ಥಿಸಿದರು. ಮಧುರ್ ಖರೆ ಪರಿಚಯಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷೆ ಅಕ್ಷರ ಸ್ವಾಗತಿಸಿ , ಉಪಾಧ್ಯಕ್ಷ ಸುಧನ್ವ ಪಿ ರಾವ್ ವಂದಿಸಿದರು. ಕಾರ್ಯದರ್ಶಿ ಸ್ಪೂರ್ತಿ ನಿರೂಪಿಸಿದರು.











