
ಬೆಳ್ತಂಗಡಿ: ಗ್ರಾಹಕ ಸ್ನೇಹಿ ಸೇವೆ, ಪಾರದರ್ಶಕ ಆಡಳಿತ ಹಾಗೂ ಸದಸ್ಯರ ವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘವು ಆರ್ಥಿಕ ವರ್ಷದಲ್ಲಿ ರೂ.1,979 ಕೋಟಿ ವ್ಯವಹಾರ ನಡೆಸಿ, ರೂ.5.85 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಬೆಳ್ತಂಗಡಿ ಸಹಕಾರಿ ಕ್ಷೇತ್ರದಲ್ಲಿ ಗಮನಾರ್ಹ ದಾಖಲೆ ನಿರ್ಮಿಸಿದೆ. ಸಂಘದ ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಭಗೀರಥ ಜಿ. ಹೇಳಿದರು.
ಬೆಳ್ತಂಗಡಿಯ ಸಿವಿಸಿ ಹಾಲ್ನಲ್ಲಿ ನಡೆದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಹಕ ಸ್ನೇಹಿ ವ್ಯವಹಾರವೇ ಸಂಸ್ಥೆಯ ಯಶಸ್ಸಿನ ಮೂಲಮಂತ್ರ. ಸದಸ್ಯರು ಹಾಗೂ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವ ರೀತಿಯಲ್ಲಿ ವಿವಿಧ ಸೇವೆಗಳನ್ನು ಒದಗಿಸುತ್ತಿರುವುದರಿಂದ ಸಂಘವು ನಿರಂತರ ಪ್ರಗತಿ ಸಾಧಿಸುತ್ತಿದೆ.
ಆರ್ಥಿಕ ವರ್ಷದಲ್ಲಿ ರೂ.1,979 ಕೋಟಿ ವ್ಯವಹಾರ ನಡೆಸಿ ರೂ.5.85 ಕೋಟಿ ಲಾಭ ಗಳಿಸಿರುವುದು ಸಂಘದ ಮೇಲಿನ ಸದಸ್ಯರು ಮತ್ತು ಗ್ರಾಹಕರು ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಅತಿ ಹೆಚ್ಚು ವ್ಯವಹಾರದೊಂದಿಗೆ ಅತಿ ಹೆಚ್ಚು ಲಾಭ ಗಳಿಸಿದ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸಂಘ ಪಾತ್ರವಾಗಿದೆ ಎಂದು ಅವರು ಹೇಳಿದರು.
ಶ್ರೀ ಗುರುದೇವ ಗೌರವಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾಧಿಕಾರದ ಆಯುಕ್ತರಾದ ಜಿ. ಜಗದೀಶ್ ಅವರನ್ನು ‘ಶ್ರೀ ಗುರು ಮಾಣಿಕ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಯಕ್ಷಗಾನ ಕ್ಷೇತ್ರದ ಹಿರಿಯ ಹಾಸ್ಯ ಕಲಾವಿದ ಸುಂದರ ಬಂಗಾಡಿ, ಸ್ನೇಹದೀಪ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಂಸ್ಥಾಪಕಿ ತಬಸ್ಸುಮ್, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕು. ದಿಶಾ ಪೂಜಾರಿ ಹಾಗೂ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರಿಗೆ ‘ಶ್ರೀ ಗುರುದೇವ ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ.,ನಿರ್ದೇಶಕರಾದ ಸುಜಿತಾ ವಿ. ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ. ದಿವಾಕರ್, ಚಂದ್ರಶೇಖರ್, ಧರ್ಣಪ್ಪ ಪೂಜಾರಿ, ಗಂಗಾಧರ ಮಿತ್ತಮಾರ್, ಧರಣೇಂದ್ರ ಕುಮಾರ್ ಪಿ., ಆನಂದ ಪೂಜಾರಿ ಕೆ., ಡಾ. ರಾಜಾರಾಮ ಕೆ.ಬಿ., ಜಯವಿಕ್ರಮ್ ಪಿ., ಚಿದಾನಂದ ಪೂಜಾರಿ, ರಕ್ಷಿತ್ ಶಿವರಾಮ್, ಸೂರಾಜ್ ಕುಮಾರ್, ವಿಶೇಷಾಧಿಕಾರಿ ಎಂ. ಮೋನಪ್ಪ ಪೂಜಾರಿ ಹಾಗೂ ಸಿಇಒ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು.
ಸೊಸೈಟಿಯ ಅಧಿಕಾರಿಗಳು, ವ್ಯವಸ್ಥಾಪಕರು, ಸಿಬ್ಬಂದಿ, ಗ್ರಾಹಕ ಮಿತ್ರರು ಹಾಗೂ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದ್ದರು.












