ತಾಲೂಕಿನ ಬಡ ಮುಸ್ಲಿಂರನ್ನು ಅಜ್ಮೀರ್‌ಗೆ ಕಳುಹಿಸುವ ಪಿತೂರಿ: ಮತದಾರರು ಜಾಗೃತರಾಗಬೇಕು: ಸಲೀಂ ಗುರುವಾಯನಕರೆ

Suddi Udaya

ಬೆಳ್ತಂಗಡಿ: ತಾಲೂಕಿನ ಬಡ ಕುಟುಂಬದ ಮುಸ್ಲಿಂರನ್ನು ಚುನಾವಣೆ ಕಳೆಯುವ ತನಕ ಅಜ್ಮೀರ್‌ಗೆ ಕಳುಹಿಸುವ ಹಾಗೂ ಮತ್ತೊಂದು ಕಡೆಯಿಂದ ದಲಿತರು, ಅಲ್ಪಸಂಖ್ಯಾತರಿಗೆ ಹಣದ ಆಮೀಷ ಒಡ್ಡಿ ಅವರ ಐಡಿ ಕಾರ್ಡ್ ಪಡೆಯುವ ಪಿತೂರಿ ನಡೆಯುತ್ತಿದ್ದು, ಇದರ ಬಗ್ಗೆ ಮತದಾರರು ಜಾಗೃತರಾಗಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಗರ ಅಧ್ಯಕ್ಷ ಸಲೀಂ ಗುರುವಾಯನಕೆರೆ ಹೇಳಿದರು.
ಅವರು ಎ.27ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜೆಡಿಎಸ್ ಪಕ್ಷದ ಅಭ್ಯರ್ಥಿ ಆಶ್ರಫ್‌ ಆಲಿಕುಂಞಿ ಹಾಗೂ ಎಸ್‌ಡಿಪಿಐ ಪಕ್ಷದ ಅಭ್ಯರ್ಥಿ ಅಕ್ಬರ್ ಅವರಿಗೆ ಬಿಜೆಪಿ ಸಹಕಾರ ನೀಡಿ ಅವರನ್ನು ಚುನಾವಣೆಗೆ ನಿಲ್ಲಿಸಿ ಅಲ್ಪಸಂಖ್ಯಾತ ಮತವನ್ನು ಒಡೆಯಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದರು. ಪತ್ರಕರ್ತ ಆಶ್ರಫ್‌ರನ್ನು ರಾತ್ರಿ ತನ್ನಲ್ಲಿಗೆ ಬರಮಾಡಿಕೊಂಡು ಜೆಡಿಎಸ್‌ನಿಂದ ಸ್ಪರ್ಧೆ ಮಾಡುವಂತೆ ದೊಡ್ಡ ಆಮಿಷ ಒಡ್ಡಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿಗೂ ಚುನಾವಣೆಗೆ ಸ್ಪರ್ಧಿಸಲು ಸಹಾಯ ಮಾಡಿದ್ದಾರೆ ಎಂದು ಅಪಾದಿಸಿದರು.


ಅಲ್ಪಸಂಖ್ಯಾತ ಘಟಕ ಗ್ರಾಮೀಣ ಅಧ್ಯಕ್ಷ ಆಶ್ರಫ್ ನೆರಿಯ ಅವರು ಮಾತನಾಡಿ, ಇಂದು ನಕಲಿ ಜಾತ್ಯತೀತ ಪಕ್ಷದಿಂದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಸ್‌ಡಿಪಿಐ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್‌ನ್ನು ಟಾರ್ಗೇಟ್ ಮಾಡಿದೆ. ಆದರೆ ಬಿಜೆಪಿ ಪರ ಮೃದು ಧೋರಣೆ ಅನುಸರಿಸಿದೆ, ಬಿಜೆಪಿ ಹಾಗೂ ಎಸ್‌ಡಿಪಿಐ ಕೋಮುವಾದಿ ಪಕ್ಷವಾಗಿದೆ ಎಂದು ಆರೋಪಿಸಿದರು. ಜೆಡಿಎಸ್ ಅಭ್ಯರ್ಥಿ ಆಶ್ರಫ್‌ಆಲಿಕುಂಞಿಯವರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪಕ್ಷ ಫೇಕ್ ಏಕೌಂಟ್ ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ಅಭ್ಯರ್ಥಿಗೆ ಇದರ ಅಗತ್ಯವಿಲ್ಲ. ನಿಮ್ಮ ನಾಟಕ ಹೆಚ್ಚು ಕಾಲ ನಡೆಯುವುದಿಲ್ಲ, ಅಲ್ಪಸಂಖ್ಯಾತರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಡಿಸಿಸಿ ಸದಸ್ಯ ಹಾಗೂ ಜಿಲ್ಲಾ ಉಪಾಧ್ಯಕ್ಷ ಪಿ.ಟಿ ಸೆಭಾಸ್ಟಿನ್ ಕಳೆಂಜ ಸ್ವಾಗತಿಸಿದರು. ನಿವೃತ್ತ ಸೈನಿಕ ಮಹಮ್ಮದ್ ರಫೀ ವಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಘಟಕದ ನಾಯಕ ಅಬ್ದುಲ್‌ರಹಿಮಾನ್ ಪಡ್ಪು, ದ.ಕ ಜಿಲ್ಲಾ ವೀಕ್ಷಕ ಪ್ರಶಾಂತ ವೇಗಸ್, ಡಿಸಿಸಿ ಸದಸ್ಯೆ ಹಾಜಿರಾ ಉಪಸ್ಥಿತರಿದ್ದರು.

Leave a Comment

error: Content is protected !!