ತಾಲೂಕಿನಲ್ಲಿ ಮುಂದುವರಿದ ಬೆಟ್ಟಿಂಗ್ ಭರಾಟೆ

Suddi Udaya

ಬೆಳ್ತಂಗಡಿ: ಮತ ಚಲಾವಣೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಒಂದು ಹಂತದ ನಿಟ್ಟುಸಿರು ಬಿಟ್ಟಿರಬಹುದು. ಆದರೆ, ವಾಸ್ತವವಾಗಿ ಈಗಿನಿಂದಲೇ ಅವರ ಹೃದಯಬಡಿತ ಹೆಚ್ಚಾಗಿದೆ. ಕಾರಣ ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಲಿರುವುದು.

ಮತ ಎಣಿಕೆ ನಡೆಯುವ ಶನಿವಾರದವರೆಗೂ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ನಡುವೆ ನಡೆಯುತ್ತಿದೆ. ಸೋಲು- ಗೆಲುವಿನ ಲೆಕ್ಕಾಚಾರ.
ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ಅಂತ್ಯಗೊಂಡು ಮತಪೆಟ್ಟಿಗೆ ಸ್ಟ್ರಾಂಗ್ ರೂಮಿಗೆ ತಲುಪುತ್ತಿದ್ದಂತೆ ಇತ್ತ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಸೋಲು-ಗೆಲುವಿನ ಲೆಕ್ಕಾಚಾರದ ನಡುವೆ ಬೆಟ್ಟಿಂಗ್ ಭರಾಟೆ ಜೋರಾಗಿ ಆರಂಭಗೊಂಡಿದೆ. ಈಗ ಬೂತ್‌ಮಟ್ಟದಲ್ಲಿ ನಡೆದಿರುವ ಶೇಕಡವಾರು ಮತ ಚಲಾವಣೆಯ ಲೆಕ್ಕವಿಟ್ಟುಕೊಂಡು ತಾಳೆ ಹಾಕುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇಡೀ ದಿನ ಕ್ಷೇತ್ರದ ಮತಗಟ್ಟೆಗಳಲ್ಲಿ ಕಾಣಿಸಿಕೊಂಡ ಮತದಾರರನ್ನೇ ನೋಡಿ ಲೆಕ್ಕ ಹಾಕುವ ಕಾರ್ಯವೂ ಒಂದೆಡೆ ನಡೆದಿದೆ. ಯಾರಿಗೆ ಎಷ್ಟು ಮತ, ಯಾವ ಬೂತಿನಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಬಿದ್ದಿರಬಹುದೆಂದು ಅಲೆದು ತೂಗಿ ಇದರ ಆಧಾರದಲ್ಲಿ ಬೆಟ್ಟಿಂಗ್ ಗ್ರಾಮ ಗ್ರಾಮದಲ್ಲಿ ನಡೆಯುತ್ತದೆ
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು, ಯಾರು ಸೋಲಬಹುದು ಎಂಬ ಲೆಕ್ಕಚಾರಗಳು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರಲ್ಲಿ ನಡೆಯುತ್ತಿದ್ದು, ಅವರು ಪಡೆಯಲಿರುವ ಮತಗಳ ಲೆಕ್ಕಾಚಾರದಲ್ಲಿ ದುಬಾರಿ ಬೆಲೆಯ ಬೆಟ್ಟಿಂಗ್ ನಡೆಯುತ್ತಿದೆ. ಹೆಚ್ಚಿನ ಕಡೆಗಳಲ್ಲಿ ನಗದು ರೂಪದಲ್ಲೇ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ. ಜೊತೆಗೆ ಯಾವ ಅಭ್ಯರ್ಥಿ ಗೆಲ್ಲಬಹುದು ಮತ್ತು ಯಾವ ಪಕ್ಷದ ಅಭ್ಯರ್ಥಿ ಸೋಲಬಹುದು ಎಂಬ ಲೆಕ್ಕದಲ್ಲಿ ಬೆಟ್ಟಿಂಗ್ ನಡೆದರೆ ಇನ್ನೊಂದು ಕಡೆಯಿಂದ ಅಭ್ಯರ್ಥಿ ಎಷ್ಟು ಮತಗಳ ಅಂತರದಲ್ಲಿ ಗೆಲ್ಲಬಹುದು ಎಂಬ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ.
ಇತರ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್:
ತಾಲೂಕಿನಲ್ಲಿ ಇತರ ಪಕ್ಷಗಳ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್ ನಡೆಯುತ್ತಿದೆ. ಜೆಡಿಎಸ್, ಎಸ್‌ಡಿಪಿಐ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತ ಪಡೆಯಬಹುದು ಎಂಬುದರ ಮೇಲೆ ಕೂಡಾ ಬೆಟ್ಟಿಂಗ್ ನಡೆಯುತ್ತಿದೆ. ತಾಲೂಕಿನಾದ್ಯಂತ ಅಭ್ಯರ್ಥಿಗಳ ಸೋಲು-ಗೆಲುವಿನ ಚರ್ಚೆಯ ನಡುವೆ ಬೆಟ್ಟಿಂಗ್ ವಿಷಯವು ಜೋರಾಗಿದೆ. ಆದರೆ ಮೌನವಾಗಿ ಮತ ಚಲಾಯಿಸಿದ ಮತದಾರ ಮಾತ್ರ ಎಂದಿನಂತೆ ತನ್ನ ಕಾಯಕದಲ್ಲಿ ತೊಡಗಿಕೊಂಡಿದ್ದಾನೆ.

Leave a Comment

error: Content is protected !!