ಎಸ್ .ಡಿ.ಎಂ. ಶಿಕ್ಷಣ ಸಂಸ್ಥೆ ವತಿಯಿಂದ ಚಾಲಕರಿಗೆ ಕಾರ್ಯಾಗಾರ

Suddi Udaya

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ  ಅನೇಕ ಜನ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದು  , ಅವರ  ಜವಾಬ್ದಾರಿಯನ್ನು ನೆನಪಿಸುವ  ಹಾಗೂ ಅವರ ಕರ್ತವ್ಯಗಳನ್ನು ಸಮರ್ಪಕವಾಗಿ  ತಿಳಿಯಪಡಿಸಲು ಚಾಲಕರಿಗಾಗಿ  ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರವನ್ನು  ಆರ್ .ಟಿ.ಓ ಬ್ರೇಕ್ ಇನ್ಸ್ಪೆಕ್ಟರ್  ಚರಣ್  ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.                                                               

 ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದು ಶಿಕ್ಷಣ ಸಂಸ್ಥೆಯ ವಾಹನ  ಚಾಲಕರಿಗೆ ಶಿಕ್ಷಕರಷ್ಟೇ ಜವಾಬ್ದಾರಿ ಇರುತ್ತದೆ. ಅವರು ಅಷ್ಟೇ  ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಆದಷ್ಟು ಜಾಗರೂಕತೆಯಿಂದ ವರ್ತಿಸಬೇಕಾಗುತ್ತದೆ.  ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು, ವಾಹನಗಳ ಮಧ್ಯೆ  ಅಂತರವನ್ನು ಕಾಯ್ದುಕೊಂಡು ಜಾಗರೂಕತೆಯಿಂದ ವಾಹನವನ್ನು ಚಲಾಯಿಸಬೇಕು. ಎಲ್ಲ ಪ್ರಯಾಣಿಕ ವಿದ್ಯಾರ್ಥಿಗಳ  ಜವಾಬ್ದಾರಿ ಚಾಲಕರ ಮೇಲೆ ಇರುವುದರಿಂದ  ಅವರು ಅತ್ಯಂತ ನಿಗಾ  ವಹಿಸಿ, ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ನುಡಿದರು.                   

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಜಿರೆ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ  ಸಂಸ್ಥೆಯ ಕಾರ್ಯದರ್ಶಿ ಡಾ| ಸತೀಶ್ ಚಂದ್ರ ಎಸ್ .  ಮಾತನಾಡಿ ಚಾಲಕರ ಕೆಲಸ ಅತ್ಯಂತ ಜವಾಬ್ದಾರಿಯುತ ಕೆಲಸವಾಗಿದ್ದು ಎಲ್ಲರನ್ನು  ಅತ್ಯಂತ ಜಾಗರೂಕತೆಯಿಂದ ದಡಮುಟ್ಟಿಸುವ ನಾವಿಕನ ಕೆಲಸವನ್ನು ಮಾಡುತ್ತಾರೆ. ಮೈಯೆಲ್ಲಾ ಕಣ್ಣಾಗಿಸಿ ಸುತ್ತಮುತ್ತಲಿನ ಆಗುಹೋಗುಗಳನ್ನು ಗಮನಿಸಿ ಜವಾಬ್ದಾರಿಯುತರಾಗಿ ಚಾಲಕರು ನಡೆದುಕೊಳ್ಳಬೇಕಾಗುತ್ತದೆ.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಸ್ವರಾಜ್ ಮಜ್ದಾ  ಸಂಸ್ಥೆಯ  ಸೇವಾ ಅಭಿಯಂತರ  ಆನಂದ್ ಆಗಮಿಸಿ ಅವರು ಚಾಲಕರ ಕರ್ತವ್ಯ , ಅದನ್ನು ನಿಭಾಯಿಸುವ ರೀತಿ,ಸಮಸ್ಯೆಗಳು ಎದುರಾದಾಗ ಎದುರಿಸುವ ರೀತಿ ಎಂಬಿತ್ಯಾದಿ ವಿಚಾರಗಳ ಕುರಿತು ಚಾಲಕರಿಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು. 

ಶ್ರೆಯಾಂಸ್ ಜೈನ್ ನಿರೂಪಿಸಿ ,ವಂದಿಸಿದ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಇ ಉಜಿರೆ ಇದರ  ಮುಖ್ಯೋಪಾಧ್ಯಾಯ ಮನಮೋಹನ್ ನಾಯಕ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ ಸೋಮಶೇಖರ್ ಶೆಟ್ಟಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ನಿಶಿತ್ ಭಾಗವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಚಾಲಕರು  ಕಾರ್ಯಕ್ರಮದ  ಪೂರ್ಣ ಪ್ರಯೋಜನ  ಪಡೆದುಕೊಂಡರು.

Leave a Comment

error: Content is protected !!