ಕರುಂ ಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya

ಉಜಿರೆ: ಪ್ರಕೃತಿಯ ಜತೆಗೆ,ಮಣ್ಣಿನ ಸತ್ವ,ಶಕ್ತಿ ಯಿಂದ ಗೃಹ ಸಂಗೀತ ಶಿಬಿರ ಹೆಚ್ಚು ಅಪ್ಯಾಯಮಾನ .ಮುಂದಿನ ಜನಾಂಗ ತಯಾರು ಮಾಡಲು, ವ್ಯಕ್ತಿತ್ವ ನಿರ್ಮಾಣಕ್ಕೆ ,ಅಂತರಂಗದಲ್ಲಿ ಸಂಸ್ಕೃತಿ ಸಂಸ್ಕಾರ ಕೊಡುವ ಶಿಕ್ಷಣ ಅಗತ್ಯ. ಸಂಸಾರದಲ್ಲಿ ನೆಮ್ಮದಿಯಿರಲು ಸಂಸ್ಕಾರ ಬೇಕು. ಭಾರತೀಯರನ್ನಾಗಿ ಮಾಡುವ ದೊಡ್ಡ ಕೆಲಸ ಇಂತಹ ಶಿಬಿರಗಳಿಂದ ಆಗುತ್ತಿದೆ. ಇದನ್ನು ಆನಂದಿಸುವ ವರ್ಗ ಕಡಿಮೆಯಾದರೂ ಎಲ್ಲ ಕಲಾವಿದರ ಸಮ್ಮಿಲನ, ಆಯೋಜಕರ ಪ್ರೀತಿಗೆ ಸರಿಸಮಾನ ಯಾವುದಿಲ್ಲ. ಉತ್ತಮ ವಾತಾವರಣದಲ್ಲಿ ಪ್ರತಿ ವರ್ಷ ಶಿಬಿರದ ಮೂಲಕ ಕಲಾವಿದರ ಸೃಷ್ಟಿಯಾಗಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ  ಯವರು ನುಡಿದರು.   

ಅವರು ಮೇ 28 ರಂದು ಧರ್ಮಸ್ಥಳ ಸಮೀಪದ ನಿಡ್ಲೆ ಕರುಂ ಬಿತ್ತಿಲು ಸಂಗೀತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪ್ರತಿ ವರ್ಷ ವೀಣೆ ಶೇಷಣ್ಣ ಹೆಸರಿನಲ್ಲಿ ಕ್ಷೇತ್ರದಲ್ಲಿ ಸಂಗೀತ ಸಾಧಕರಿಗೆ ಪ್ರಶಸ್ತಿ ನೀಡುತ್ತಾ  ಬರುತ್ತಿದೆ. ವಿದ್ವಾನ್  ವಿಠ್ಠಲ ರಾಮಮೂರ್ತಿಯವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವುದು ಸಂತೋಷ ತಂದಿದೆ. ದೇಶ ವಿದೇಶಗಳಲ್ಲಿ ಅವರ  ಸಾಧನೆ  ಅನನ್ಯವಾದುದು. ಯುವ ಸಂಗೀತ ಆಸಕ್ತರಿಗೆ ಪ್ರತಿ ವರ್ಷ  ಶಿಬಿರ ಆಯೋಜಿಸಿ  ಸಂಗೀತಾಭ್ಯಾಸ ನಡೆಸುತ್ತಿರುವುದು ಶ್ಲಾಘನೀಯವೆಂದು ಅಭಿನಂದಿಸಿದರು. ಬೆಳಗಾವಿಯ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನಗೈದು ಮಕ್ಕಳಲ್ಲಿ ಬದಲಾವಣೆಯಾದರೆ ಮಾತ್ರ ಸ್ವಚ್ಛ ಭಾರತ ನಿರ್ಮಾಣವಾಗುವು ದು. ಹಿರಿಯರ ಮಾರ್ಗದರ್ಶನ,ದೃಷ್ಟಿಕೋನ ಬದಲಾದರೆ ಭಾರತ ವಿಶ್ವಕ್ಕೆ ಮಾದರಿಯಾಗುವುದರಲ್ಲಿ ಸಂದೇಹವಿಲ್ಲ. ಭಾರತದ ಸತ್ವ ಗ್ರಾಮೀಣ ಪ್ರದೇಶದ ಇಂತಹ  ಶಿಬಿರಗಳಲ್ಲಿದೆ . ಯಾವುದೇ ಕಲೆಯನ್ನು ಶಿಕ್ಷಣ ಭಾಗವಾಗಿ ಅಭ್ಯಾಸ ನಡೆಸಿದರೆ  ಅದು ಶಾಶ್ವತವಾಗಿ  ಉಳಿದು ಮನಸ್ಸು, ಬುದ್ಧಿ ವಿಶಾಲ ಹಾಗೂ ಹೃದಯ ವೈಶಾಲ್ಯತೆ ಹೊಂದುವುದು. ಕಲೆ ಪಠ್ಯದ ವಿಷಯವಾಗಿ ಸೇರ್ಪಡೆಗೊಂಡರೆ ಮಕ್ಕಳಲ್ಲಿ ವ್ಯಕ್ತಿತ್ವ,ಸರ್ವಾಂಗೀಣ  ಬೆಳವಣಿಗೆಯಾಗುತ್ತದೆ.  ಶಿಬಿರಗಳು ಮನೋ ಹಾಗೂ ಬೌದ್ಧಿಕ ವಿಕಾಸಕ್ಕೆ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.                               

ಸಂಗೀತ ವಿದ್ವಾನ್ ವಿ.ವಿ.ಸುಬ್ರಹಣ್ಯಮ್ ಮತ್ತು ವಿದ್ವಾನ್ ಉನ್ನಿಕೃಷ್ಣನ್ ಶುಭಾಶಂಸನೆಗೈದರು. ಡಾ! ಹೇಮಾವತಿ ಹೆಗ್ಗಡೆಯವರು,ವಿಠ್ಠಲ ರಾಮೂರ್ತಿಯವರ ಮಾತೃ ಕೃಷ್ಣವೇಣಿಯಮ್ಮ  ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ ವಿಠ್ಠಲ ರಾಮಮೂರ್ತಿಯವರು ಸ್ವಾಗತಿಸಿ,ಪ್ರಸ್ತಾವಿಸಿ,ಮುಖ್ಯ ಅತಿಥಿಗಳನ್ನು ಗೌರವಿಸಿದರು. ಡಾ!ಹೆಗ್ಗಡೆಯವರು ಮತ್ತು ಡಾ!ಹೇಮಾವತಿ ಹೆಗ್ಗಡೆಯವರನ್ನು ಶಾಲು ಹೊದಿಸಿ, ತಂಬೂರಿಯನ್ನು ಸ್ಮರಣಿಕೆಯಾಗಿ   ಸಮರ್ಪಿಸಿದರು. ಶಿವಮೊಗ್ಗದ ಸುಬ್ರಹ್ಮಣ್ಯ ಶಾಸ್ತ್ರೀ ಮತ್ತು ಶ್ರೀಮತಿ ಮಂಜುಳಾ ಮೂರ್ತಿಯವರನ್ನು ಹೆಗ್ಗಡೆ ದಂಪತಿಗಳು ಸಮ್ಮಾನಿಸಿ ಗೌರವಿಸಿದರು.

Leave a Comment

error: Content is protected !!