ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ & ರೇಂಜರ್ಸ್ ಸಂಬಂಧಿತ ‘ವಸ್ತುಪ್ರದರ್ಶನ’, ‘ಅಂತರ್ ತರಗತಿ ಸ್ಪರ್ಧೆ’ ಪ್ರಮುಕ’23 ಸಮಾರೋಪ

Suddi Udaya

ಉಜಿರೆ, ಜೂ.10: ಜೀವನದಲ್ಲಿ ಗುರಿ ನಿರ್ಧಾರ ಮಾಡುವಾಗ ‘ಸ್ಮಾರ್ಟ್’ ತತ್ತ್ವವನ್ನು ಅನುಸರಿಸಬೇಕು ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಕುಲಸಚಿವೆ (ಮೌಲ್ಯಮಾಪನ) ನಂದಾ ಕುಮಾರಿ ಕರೆ ನೀಡಿದರು.ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ ಜೂ.9ರಂದು ರೋವರ್ಸ್ & ರೇಂಜರ್ಸ್ (ಸ್ಕೌಟ್ಸ್ & ಗೈಡ್ಸ್ ಹಿರಿಯ ವಿಭಾಗ) ಘಟಕವು ಆಯೋಜಿಸಿದ್ದ ಒಂದು ದಿನದ ‘ರೋವರ್ಸ್ & ರೇಂಜರ್ಸ್ ಸಂಬಂಧಿತ ವಸ್ತುಪ್ರದರ್ಶನ’ ಹಾಗೂ ‘ಅಂತರ್ ತರಗತಿ ಸ್ಪರ್ಧೆ’ ‘ಪ್ರಮುಕ 23’ ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿರ್ದಿಷ್ಟತೆ (ಸ್ಪೆಸಿಫಿಕ್), ಸಮಂಜಸ (ಮೆಶರೇಬಲ್), ಸಾಧನಾರ್ಹ (ಅಚೀವೇಬಲ್), ವಾಸ್ತವಿಕ (ರಿಯಲಿಸ್ಟಿಕ್) ಹಾಗೂ ಕಾಲಮಿತಿ (ಟೈಮ್ ಬೌಂಡ್) ಅಕ್ಷರಗಳಿಂದಾದ ‘ಸ್ಮಾರ್ಟ್’ ತತ್ತ್ವ ಪ್ರಕಾರ ಬದುಕಿನಲ್ಲಿ ಮುಂದುವರಿದಾಗ ಮಹತ್ತರವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ. ಗುರಿ ನಿರ್ಧಾರ ಮಾಡುವಾಗ ‘ಸ್ಮಾರ್ಟ್’ ಆಗಿರಬೇಕು ಎಂದು ಅವರು ವಿವರಿಸಿದರು. ರೋವರ್- ರೇಂಜರ್ ಗಳ ಧ್ಯೇಯವಾಗಿರುವ ಸೇವೆಯು ಮಾನವತೆ ಹಾಗೂ ಮಾನವೀಯತೆ ಬಗೆಗಿನ ಸೇವೆಯಾಗಿದೆ.

ಪ್ರಮುಕ 23 ಕಾರ್ಯಕ್ರಮವು ಅತಿ ವಿಶಿಷ್ಟವಾಗಿ ಮೂಡಿಬಂದಿದ್ದು, ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಕಾರಣವಾಗಿದೆ ಎಂದು ಅವರು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ. ಅವರು ಮಾತನಾಡಿ, ಸಮಗ್ರ ಶಿಕ್ಷಣ ಹಾಗೂ ಸಮಗ್ರ ಬೆಳವಣಿಗೆ ಅಗತ್ಯ ಎಂದು ಅಭಿಪ್ರಾಯಪಟ್ಟರು. “ವಿದ್ಯಾರ್ಥಿಗಳು ಸಾಮಾಜಿಕವಾಗಿ, ಶೈಕ್ಷಣಿಕ, ದೈಹಿಕ ಹಾಗೂ ಭಾವನಾತ್ಮಕವಾಗಿಯೂ ಸಬಲರಾಗಬೇಕು” ಎಂದರು.ಕಾಲೇಜಿನ ರೋವರ್ಸ್ & ರೇಂಜರ್ಸ್ ಘಟಕದ ಮೊದಲ ಮುಖ್ಯಸ್ಥರಾಗಿ 10 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಅವರು, ಅಂದಿನ ದಿನಗಳನ್ನು, ಸವಾಲುಗಳನ್ನು, ಸಾಧನೆಗಳನ್ನು ಸ್ಮರಿಸಿಕೊಂಡರು. ಪ್ರಸ್ತುತ ಘಟಕವು ನವೀನ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಸ್ತುತ ಉದ್ಯೋಗ ಕ್ಷೇತ್ರಕ್ಕೆ ಉಪ ಕೌಶಲಗಳ ಜತೆಗೆ ಸಾಫ್ಟ್ ಸ್ಕಿಲ್ ಅಗತ್ಯವಾಗಿವೆ. ಹಾಗಾಗಿ, ಪಠ್ಯಕ್ರಮವನ್ನು ಸಹ ಪಠ್ಯಕ್ರಮಗಳೊಂದಿಗೆ ಸಂಯೋಜಿಸಲಾಗಿದೆ. ರೋವರ್ಸ್ ರೇಂಜರ್ಸ್ ಚಟುವಟಿಕೆಗಳು ವಿಭಿನ್ನವಾಗಿದ್ದು, ಜೀವನ ನಿರ್ವಹಣೆಗೆ ಪೂರಕವಾಗಿವೆ. ಕೌಶಲವರ್ಧನೆಯಾಗುತ್ತದೆ ಎಂದು ಅವರು ತಿಳಿಸಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ತೃತೀಯ ಬಿ.ಎ. ‘ಎ’ ವಿಭಾಗದ ತಂಡವು ಸಮಗ್ರ ಪ್ರಶಸ್ತಿ (ಓವರಾಲ್ ವಿನ್ನರ್ಸ್) ಹಾಗೂ ಪ್ರಥಮ ಬಿ.ಎಸ್ಸಿ. ‘ಬಿ’ ವಿಭಾಗದ ತಂಡ ಓವರಾಲ್ ರನ್ನರ್ಸ್ ಪ್ರಶಸ್ತಿ ಪಡೆಯಿತು. ಕಾರ್ಯಕ್ರಮ ಸಂಯೋಜಕಿ, ರೋವರ್ಸ್ & ರೇಂಜರ್ಸ್ ಘಟಕದ ರೇಂಜರ್ ಲೀಡರ್ (RL) ಗಾನವಿ ಉಪಸ್ಥಿತರಿದ್ದರು. ರೋವರ್ ಸ್ಕೌಟ್ ಲೀಡರ್ (RSL) ಪ್ರಸಾದ್ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕಿ ಸಿಂಚನಾ ಎನ್. ಶೆಟ್ಟಿ ವಂದಿಸಿದರು. ರೇಂಜರ್ ಪುಣ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!