ಯಾರದ್ದೋ ಓಲೈಕೆಗಾಗಿ ಸರ್ಕಾರದ ತೀರ್ಮಾನಗಳು: ಮತಾಂತರ ನಿಷೇಧ ಕಾಯಿದೆ ವಾಪಸ್ಸಿಗೆ ಬಿ.ಜೆ.ಪಿ ವಿರೋಧ

Suddi Udaya

ಬೆಳ್ತಂಗಡಿ: ಜೂ1 ರ ಕರ್ನಾಟಕ ಸರ್ಕಾರವು ಜೂನ್ 15ರ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ರದ್ದು ಸೇರಿದಂತೆ ಬಿ.ಜ.ಪಿ ಆಡಳಿತದ ಕಾಲದ ನಿರ್ಧಾರಗಳನ್ನು ರದ್ದುಗೊಳಿಸುವ ತೀರ್ಮಾನವನ್ನು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ತೀವ್ರವಾಗಿ ವಿರೋಧಿಸುತ್ತದೆ.
ಕಾಂಗ್ರೆಸ್ ಸರ್ಕಾರದ ಆರಂಭಿಕ ಈ ನಡೆಯನ್ನು ಗಮನಿಸಿದರೆ ಯಾರದೋ ಓಲೈಕೆಗಾಗಿ ತರಾತುರಿಯಲ್ಲಿ ಈ ತೀರ್ಮಾನಗಳನ್ನು ತೆಗೆದುಕೊಂಡಂತೆ ಗೋಚರಿಸುತ್ತದೆ ಮತಾಂತರ ನಿಷೇಧ ಕಾಯಿದೆ ರದ್ದುಗೊಳಿಸುವ ನಿರ್ಧಾರ ಧಾರ್ಮಿಕ ಮತಾಂತರ ನಿಷೇಧಿಸುವ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿ ಸಂವಿಧಾನ ಬಾಹಿರ ಕೃತ್ಯವಾಗಿದೆ. ಈ ಹಿಂದೆ ಬಿ.ಜೆ.ಪಿ ಸರ್ಕಾರ ಕೈ ಗೊಂಡ ಮತಾಂತರ ನಿಷೇಧ ಕಾಯಿದೆಯಲ್ಲಿ ಕಠಿಣ ಶಿಕ್ಷೆ ದಂಡ ವಿಧಿಸುವ ಅಂಶ ಕೈ ಬಿಡಲು ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರ ಮುಂದಿನ ದಿನಗಳಲ್ಲಿ ಸಾಮಾಜಿಕ ಸ್ವಾಸ್ತವನ್ನು ಹಾಳುಗೆಡವಲಿದೆ.
ಅಲ್ಪಸಂಖ್ಯಾತರು ಬದಲಾವಣೆ ಮಾಡಿ ಎಂದು ಎಂದಿಗೂ ಕೇಳದಿದ್ದರೂ ಹಠಕ್ಕೆ ಬಿದ್ದಂತೆ ರಾಷ್ಟ್ರೀಯತೆ ವಿಚಾರಕ್ಕೆ ಮತ್ತು ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಘಾಸಿಯುಂಟು ಮಾಡಲೇಸಗುವ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಹಡಗೇವಾರ್, ಸಾರ್ವಕರವರ ಪಠ್ಯ ಕೈ ಬಿಟ್ಟು ದ್ರೋಹವೆಸಗುತ್ತಿದೆ. ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.
ರೈತರಿಗೆ ಉತ್ತಮ ಬೆಲೆ ಸಿಗುವ ಎಪಿಎಂಸಿ ಕಾಯಿದೆ ತಿದ್ದುಪಡಿ ವಾಪಸ್ ಮಾಡುವ ಮೂಲಕ ರೈತಾಪಿ ವರ್ಗಕ್ಕೆ ಅನ್ಯಾಯವೆಸಗಿದೆ ಮುಂದಿನ ದಿನಗಳಲ್ಲಿ ಈ ಕುರಿತಂತೆ ಬಿ.ಜೆ.ಪಿ ಜನಾಂದೋಲನ ನಡೆಸಲಿದೆ.
ಪ್ರಗತಿ ಪೂರಕವಾಗಿ ಮುಂದೆ ಹೆಜ್ಜೆ ಇಡಬೇಕಾದ ಸರ್ಕಾರ ತಾನು ನೀಡಿರುವ ಭರವಸೆಗಳನ್ನು ಈಡೇರಿಸಲು ಪೇಚಾಡುತ್ತಾ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿ ಯಾರನ್ನೋ ಓಲೈಸಿ ಜನರ ಗಮನ ಬೇರೆಡೆ ಸೆಳೆಯುವ ಈ ಪ್ರಯತ್ನವನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ. ಎಂದು ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಪ್ರ.ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!