ನೋಡಿ ತಿಳಿ, ಮಾಡಿ ಕಲಿ: ಧರ್ಮಸ್ಥಳದಲ್ಲಿ ಎಸ್.ಡಿ.ಎಂ. ಆಂ.ಮಾ. ಶಾಲೆಯಲ್ಲಿ ವಿಶಿಷ್ಠ ರೀತಿಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya


ಉಜಿರೆ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ಮಂಗಳವಾರ ಪ್ರಸಕ್ತ ಶೈಕ್ಷಣಿಕ ವರ್ಷದ ವಿವಿಧ ಸಂಘಗಳನ್ನು ವಿಶಿಷ್ಠ ರೀತಿಯಲ್ಲಿ ಉದ್ಘಾಟಿಸಲಾಯಿತು.
ಶಾಲೆಯಲ್ಲಿ ಎಲ್ಲೆಲ್ಲೂ ಸಂಭ್ರಮ- ಸಡಗರ, ಹಬ್ಬದ ವಾತಾವರಣ. ಶಾಲಾ ಮುಖ್ಯಶಿಕ್ಷಕಿ ಪರಿಮಳಾ ಎಂ. ವಿ. ಅವರ ನೇತೃತ್ವ ಮತ್ತು ಎಲ್ಲಾ ಶಿಕ್ಷಕರ ದಕ್ಷ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೆ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ, ನಿರ್ವಹಿಸಿದರು.
ಶಾಲೆ ಹಾಗೂ ಶಾಲಾ ಪರಿಸರವನ್ನು ಸ್ವಚ್ಛವಾಗಿಟ್ಟು ಆಕರ್ಷಕ ವಿನ್ಯಾಸದಿಂದ ವಿದ್ಯಾರ್ಥಿಗಳೆ ಸಿಂಗರಿಸಿದರು.
ಅತಿಥಿಗಳ ಸ್ವಾಗತ, ಸತ್ಕಾರ, ವೇದಿಕೆ ವ್ಯವಸ್ಥೆ, ಸಭಾಕಾರ್ಯಕ್ರಮ ನಿರ್ವಹಣೆ, ಸ್ವಾಗತ-ಧನ್ಯವಾದ – ಎಲ್ಲವನ್ನೂ ವಿದ್ಯಾರ್ಥಿಗಳೆ ಯಶಸ್ವಿಯಾಗಿ ನಿರ್ವಹಿಸಿದರು.


ಶಾಲಾ ಸಂಚಾಲಕರಾದ ಅನಂತಪದ್ಮನಾಭ ಭಟ್ ದೀಪ ಬೆಳಗಿಸಿ ಸಮಾರಂಭವನ್ನು ಹಾಗೂ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿದರು.
ಧರ್ಮಸ್ಥಳ ದೇವಳದ ಪಾರುಪತ್ಯಗಾರ್ ಲಕ್ಷ್ಮೀ ನಾರಾಯಣ ರಾವ್ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು. ರಾಜದರ್ಬಾರಿನಲ್ಲಿ ಸಂಘದ ವಾರ್ಷಿಕ ಯೋಜನೆಯನ್ನು ವಿವರಿಸಲಾಯಿತು.
ಕೃಷಿತಜ್ಞ ಬಾಬು ಎಂ.ಕೆ. ಕಬ್ಬು ನೆಡುವ ಮೂಲಕ ಪರಿಸರ ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನಮ್ಮ ಜೀವನ ಮತ್ತು ಪ್ರಕೃತಿ, ಪರಿಸರ ಪೂರಕವಾಗಿರಬೇಕು ಮಾರಕವಾಗಿರಬಾರದು ಎಂದು ಅವರು ಹೇಳಿದರು.
ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಮಾನವ ಸಂಪನ್ಮೂಲ ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುನಿಲ್ ಪಿ.ಜೆ., ಪ್ರಯೋಗದ ಮೂಲಕ ವಿಜ್ಞಾನಸಂಘವನ್ನು ಉದ್ಘಾಟಿಸಿ ದೈನಂದಿನ ಜೀವನದಲ್ಲಿ ವಿಜ್ಞಾನದ ಮಹತ್ವವನ್ನು  ವಿವರಿಸಿದರು. ಪ್ರಕೃತಿಯಿಂದ ನಾವು ಸಾಕಷ್ಟು ಪಾಠವನ್ನು ಕಲಿಯಬೇಕು ಎಂದರು.
ಭಿತ್ತಿಪತ್ರ ಸಂಘವನ್ನು ಉದ್ಘಾಟಿಸಿದ ಆರ್.ಯನ್. ಪೂವಣಿ, ವಿದ್ಯಾರ್ಥಿಗಳು ಓದುವ, ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಹವ್ಯಾಸಗಳಿಂದ ಬಿಡುವಿನ ವೇಳೆಯ  ಸದುಪಯೋಗದೊಂದಿಗೆ ಜ್ಞಾನಕ್ಷಿತಿಜ ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಧರ್ಮಸ್ಥಳ ಪೊಲೀಸ್‌ಠಾಣೆಯ ಮಂಜುನಾಥ್, ರೆಡ್‌ಕ್ರಾಸ್ ಸಂಘವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳೀದರು.
ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ತೆರೆಯುವ ಮೂಲಕ ಆರೋಗ್ಯ ಸಂಘವನ್ನು ಉದ್ಘಾಟಿಸಿದ ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಮಂಜು, ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಭಾಗ್ಯ ಹೊಂದುವ ವಿಧಾನವನ್ನು ವಿವರಿಸಿದರು.
ಪತ್ರಕರ್ತ ಶಿಬಿ, ಧರ್ಮಸ್ಥಳ ವಾಚಕರ ಸಂಘ ಉದ್ಘಾಟಿಸಿ ಓದುವ ಹವ್ಯಾ¸ದಿಂದÀ ವೈಚಾರಿಕತೆಯೊಂದಿಗೆ ಮಾನವೀಯತೆಯನ್ನು ಬೆಳೆಸಿಕೊಂಡು ವಿಶ್ವಮಾನವರಾಗಬಹುದು ಎಂದು ಹೇಳಿದರು.
ಕ್ರೀಡಾಸಂಘವನ್ನು ಯೋಗಪಟು ಕುಮಾರಿ ಶರಧ್ವಿ, ಚದುರಂಗ ಆಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಕುಮಾರಿ ಅಪೇಕ್ಷಾ ಸ್ವಾಗತಿಸಿದರು. ಆದಿತ್ಯ ಧನ್ಯವಾದವಿತ್ತರು.

Leave a Comment

error: Content is protected !!