ಆದಿವಾಸಿಗಳ ಪ್ರಶ್ನೆಗಳಿಗೆ ಸರಕಾರದ ಸ್ಪಂದನೆ: ಬಜೆಟ್ ನ ಕೆಲವು ಅಂಶಗಳಿಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸ್ವಾಗತ

Suddi Udaya

ಬೆಳ್ತಂಗಡಿ: ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ 2023- 24 ನೇ ಸಾಲಿನ ಆಯವ್ಯಯವನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ವಿಮರ್ಶಾತ್ಮಕವಾಗಿ ಸ್ವಾಗತಿಸಿದೆ.

ಈ ಆಯವ್ಯವನ್ನು ಮಂಡಿಸುವ ಸಂದರ್ಭದಲ್ಲಿಯೂ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ, ಶಾಂತಿ ಮತ್ತು ಸೌಹಾರ್ದತೆಯ ನೆಲೆಬೀಡಾಗಿ ಕಾಪಾಡಿಕೊಳ್ಳುವ ಬದ್ಧತೆಯನ್ನು ಪುನರುಚ್ಚರಿಸಿರುವುದು ಕೂಡ ಸ್ವಾಗತಾರ್ಹ.

ಬಜೆಟ್ ನಲ್ಲಿ ಆದಿವಾಸಿ ಸಮುದಾಯಗಳ ಬಹು ದಿನಗಳ ಮುಖ್ಯ ಬೇಡಿಕೆಯಾದ ಎಸ್.ಸಿ.ಪಿ ಮತ್ತು ಟಿ.ಎಸ್. ಪಿ. ಉಪಯೋಜನೆಯ ಹಣವನ್ನು ಇತರೆ ಉದ್ದೇಶಗಳಿಗೆ ಮತ್ತು ಇತರೆ ಇಲಾಖೆಗಳ ಬಳಕೆಗೆ ಅವಕಾಶ ಮಾಡಿಕೊಡುತ್ತಿದ್ದ ಕಾಯ್ದೆಯ 7- ಡಿ ಪರಿಚ್ಛೇದವನ್ನು ಕೈ ಬಿಟ್ಟಿರುವುದು ಅತ್ಯಂತ ಸ್ವಾಗತಾರ್ಹವಾದದ್ದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿಸಿರುವ ದಲಿತ-ಬುಡಕಟ್ಟು ಉಪ ಯೋಜನೆ-ಎಸ್. ಸಿ.ಪಿ ಮತ್ತು ಟಿ.ಎಸ್. ಪಿ. ಗೆ ಈ ಬಜೆಟ್ ನಲ್ಲಿ 34,294 ಕೋಟಿ ರೂ.ಗಳನ್ನು ಒದಗಿಸಿರುವುದು ಅಂದರೆ ಹಿಂದಿನ ಬಜೆಟ್ ಗಿಂತ 4000 ಕೋಟಿ ರೂ.ಗಳನ್ನು ಹೆಚ್ಚಿಗೆ ನೀಡಿದ್ದಾರೆ. ಇದನ್ನು ಸ್ವಾಗತಿಸಿರುವ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ಪೂರ್ಣ ಹಣವನ್ನು ಈ ಸಮುದಾಯಗಳ ಅಭಿವೃದ್ದಿಗೆ, ಅವರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ವಿನಿಯೋಗಿಸಬೇಕು, ಅದಕ್ಕೆ ತಕ್ಕುದಾದ ಪ್ರಾಯೋಗಿಕ ಕಾರ್ಯ ಯೋಜನೆಯನ್ನು ಸಮುದಾಯಗಳ ಪ್ರತಿನಿಧಿಗಳು, ಸಂಘಟನೆಗಳೊಂದಿಗೆ ಸಮಾಲೋಚಿಸಿ ರೂಪಿಸಬೇಕು ಎಂದು ಆಗ್ರಹಿಸಿದೆ.

ಹಾಗೆಯೇ ಈ ಬಜೆಟ್ ನಲ್ಲಿ ಆದಿವಾಸಿ ಸಮುದಾಯಗಳಿಗೆ ನೀಡಲಾಗುತ್ತಿದ್ದ ಪೌಷ್ಠಿಕ ಆಹಾರವನ್ನು 6 ತಿಂಗಳಿನಿಂದ 12 ತಿಂಗಳಿಗೆ ವಿಸ್ತರಿಸಿರುವುದು ಸ್ವಾಗತಾರ್ಹ. ನಮ್ಮ ಬಹುದಿನಗಳ ಈ ಅಗತ್ಯ ಬೇಡಿಕೆಯನ್ನು ಒಪ್ಪಿದ್ದಾರೆ. ಹಾಗೇ ಮರಾಠಿ ನಾಯ್ಕ ಮುಂತಾದ ಮೂಲ ಆದಿವಾಸಿ ಸಮುದಾಯಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದೆ.

ಇದೇ ಹೊತ್ತಿನಲ್ಲಿ ಆದಿವಾಸಿಗಳ ಬದುಕಿನಲ್ಲಿ ಪರಿವರ್ತನೆ ತರುವಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ 2006 ರಂತೆ ಭೂಮಿ, ಅರಣ್ಯ, ಸಮುದಾಯ ಹಕ್ಕುಗಳು , ಜನರ ಮೂಲಭೂತ ಸೌಕರ್ಯಗಳು ದಕ್ಕುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭೂಮಿ ಖರೀದಿ, ನಿವೇಶನ, ಮನೆ ನಿರ್ಮಾಣಕ್ಕೆ ಅನುದಾನವನ್ನು ಹೆಚ್ಚಿಸಬೇಕು. ಇವಕ್ಕೆ ಅತೀ ಪ್ರಾಮುಖ್ಯತೆಯನ್ನು ನೀಡಬೇಕಿದೆ.

ಈ ದೆಸೆಯಲ್ಲಿ ಸರಕಾರವು ಸಮುದಾಯಗಳು, ಸಂಘಟನೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಮುಖ್ಯಮಂತ್ರಿಗಳ ಅದ್ಯಕ್ಷತೆಯಲ್ಲಿ ಕೂಡಲೇ ಕರೆಯ ಬೇಕೆಂದು ಒತ್ತಾಯಿಸಿದೆ ಎಂದು ವಸಂತ ನಡ ಜಿಲ್ಲಾ ಸಂಚಾಲಕ ಹಾಗೂ ತಾಲೂಕು ಅಧ್ಯಕ್ಷ, ಜಯಾನಂದ ಪಿಲಿಕಲ, ತಾಲೂಕು ಪ್ರಧಾನ ಕಾರ್ಯದರ್ಶಿ,
ಶೇಖರ್ ಎಲ್ ತಾಲೂಕು ಸಂಚಾಲಕ‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!