ಬೆಳ್ತಂಗಡಿ ಲಯನ್ಸ್ ಕ್ಲಬ್‌ ಸುವರ್ಣ ವರ್ಷಾಚರಣೆ; 50 ವಿಶಿಷ್ಟ ಕಾರ್ಯಕ್ರಮಗಳು, ಲಯನ್ಸ್ ಭವನ ನವೀಕರಣಕ್ಕೆ ನಿರ್ಧಾರ

Suddi Udaya

ಬೆಳ್ತಂಗಡಿ: 2023-24ನೇ ಸಾಲಿನಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್‌ 50ನೇ ಸೇವಾ ಸಂಭ್ರಮ ವರ್ಷಾಚರಣೆ ಆಚರಿಸಲು ನಿರ್ಧರಿಸಿದ್ದು ಆ ಹಿನ್ನೆಲೆಯಲ್ಲಿ 50 ವಿಶಿಷ್ಟ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಲಯನ್ಸ್ ಕ್ಲಬ್ ನಿಯೋಜತ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ತಿಳಿಸಿದರು.

ಬೆಳ್ತಂಗಡಿ ಪತ್ರಿಕಾಭವನದಲ್ಲಿ ಜು.19 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ 50 ನೇ ವರ್ಷದ ನೂತನ ಸಮಿತಿಯ ಪದಗ್ರಹಣ ಜು.23 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಲಿದೆ. ಲಯನ್ಸ್ ಜಿಲ್ಲಾ ದ್ವಿತೀಯ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಪದಗ್ರಹಣ ನಡೆಸಿಕೊಡಲಿದ್ದಾರೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್,ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಜಿ‌ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ ಎಂದರು.

ಪದಗ್ರಹಣ ದಿದದಂದು 10 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, 5 ಮಂದಿ ಪೌರ ಕಾರ್ಮಿಕರಿಗೆ ಸನ್ಮಾನ, ಓರ್ವೆ ಅರ್ಹ ಮಧುಮಗಳಿಗೆ ಧಾರಾಸೀರೆ ವಿತರಣೆ, ಇಬ್ವರು ಅರ್ಹ ಫಲಾನುಭವಿಗಳಿಗೆ ಆರೋಗ್ಯ ಸಹಾಯಧನ ವಿತರಣೆ, ಇತರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಸೇರಿ 50 ಮಂದಿಗೆ ಸೇವಾ ಕಾರ್ಯ ನಡೆಯಲಿದೆ. ಸಿ.ಎ ಉತ್ತೀರ್ಣರಾಗಿರುವ ಲಯನ್ಸ್ ಕುಟುಂಬದ ನಿರೀಕ್ಷಾ ಎನ್ ನಾವರ ಅವರಿಗೆ ಸನ್ಮಾನ ಮತ್ತು ಕಳೆದ ಸಾಲಿನಲ್ಲಿ ಸರಕಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಉನ್ನತ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.
ಬೆಳ್ತಂಗಡಿ ನಗರದಲ್ಲಿರುವ ಲಯನ್ಸ್ ಭವನವನ್ನು ನವೀಕರಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು. ಕಳೆದ 49 ವರ್ಷಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಮ್ಮ ಜೊತೆಗಿರುವವ ನೇತೃತ್ವದಲ್ಲಿ ಒಂದೊಂದು ಕಾರ್ಯಕ್ರಮ ಆಯೋಜಿಸಿ ಅವರನ್ನೂ ಸನ್ಮಾನಿಸಲಾಗುವುದು.
ಉಳಿದಂತೆ ವಿವಿಧ ಸೇವಾ ಸಂಘಟನೆಗಳ ಜೊತೆ ಸೇರಿಕೊಂಡು ಕೈಗೊಳ್ಳುವ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಇತ್ಯಾದಿ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸಿಕೊಂಡು ಬರಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ, ಕಾರ್ಯದರ್ಶಿ ಅನಂತಕೃಷ್ಣ ಕೋಶಾಧಿಕಾರಿ ಸುಭಾಷಿಣಿ, ನಿಕಟಪೂರ್ವಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ, ಕಾರ್ಯದರ್ಶಿ ತುಕಾರಾಮ‌ ಬಿ, ನಿಕಟ ಪೂರ್ವ ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ, ಹಿರಿಯ ಸದಸ್ಯ ರಾಮಕೃಷ್ಣ ಗೌಡ, ನಿಯೋಜಿತ ಪತ್ರಿಕಾ ಪ್ರತಿನಿಧಿ ಅಶ್ರಫ್ ಆಲಿಕುಂಞಿ ಉಪಸ್ಥಿತರಿದ್ದರು.

Leave a Comment

error: Content is protected !!