ಉಜಿರೆ ಕು| ಸೌಜನ್ಯಳ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

Updated on:

ಬೆಳ್ತಂಗಡಿ: ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಜು.25 ರಂದು ವಾಣಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮ ಗೌಡ ಹೇಳಿದರು.

ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಉಜಿರೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯಳು ಅತ್ಯಾಚಾರಕ್ಕೀಡಾಗಿ ಹೀನಾಯ ರೀತಿಯಲ್ಲಿ ದಿನಾಂಕ:09- 10-2012ರಂದು ಕೊಲೆಯಾಗಿದ್ದು ಈ ಕೃತ್ಯಕ್ಕೆ ಸಂಬಂಧಪಟ್ಟು ಬೆಳ್ತಂಗಡಿ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುತ್ತದೆ. ಈ ವಿಚಾರವಾಗಿ ಹಲವಾರು ಪ್ರತಿಭಟನೆಗಳು ಆರೋಪಗಳು ಕಂಡುಬಂದಿದ್ದು ಮುಂದಿನ ತನಿಖೆಗಳನ್ನು ಅಂದಿನ ರಾಜ್ಯ ಸರಕಾರವು ರಾಜ್ಯದ ಸಂಬಂಧಪಟ್ಟ ಇಲಾಖೆಗಳಿಂದ ತನಿಖೆಯನ್ನು ನಡೆಸಲು ಆದೇಶಿಸಿದ್ದು, ಆದರೆ ಈ ಬಗ್ಗೆ ಕುಟುಂಬ ವರ್ಗ ಹಾಗೂ ಅಕ್ರೋಶಗಳು ಪ್ರತಿಭಟನೆಗಳು ಮುಂದುವರಿದಿದ್ದ ಪರಿಣಾಮವಾಗಿ 2013ನೇ ಇಸವಿಯಲ್ಲಿ ರಾಜ್ಯ ಸರಕಾರ ದೇಶದ ಉನ್ನತ ಸ್ವತಂತ್ರ ಸಂಸ್ಥೆಯಾದ ಸಿಬಿಐ ತನಿಖೆ ನಡೆಸುವಂತೆ ಕೇಳಿಕೊಂಡ ಮೇರೆಗೆ ಸಿಬಿಐ ಅಧಿಕಾರಿಗಳು ಬೆಳ್ತಂಗಡಿಗೆ ಆಗಮಿಸಿ ತನಿಖೆಯನ್ನು ನಡೆಸಿ ಸಂತೋಷರಾವ್ ಎಂಬವನನ್ನು ಆರೋಪಿಯನ್ನಾಗಿಸಿ, ಬೆಂಗಳೂರಿನ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿರುತ್ತದೆ. ತದನಂತರ ಸಿಬಿಐ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲವು ಸದ್ರಿ ಪ್ರಕರಣದಲ್ಲಿ ಸಿಬಿಐ ನವರು ಸಂತೋಷರಾವ್ ಎಂಬುವನನ್ನು ಆರೋಪಿಯನ್ನಾಗಿಸಿರುವ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿ ಸಂತೋಷರಾವ್ ಆತ್ಯಾಚಾರ ಮಾಡಿ ಕೊಲೆ ಮಾಡಿದುದ್ದನ್ನು ಸಾಕ್ಷ್ಯ ಹಾಗೂ ಪುರಾವೆಗಳಿಂದ ಸಾಬೀತು ಪಡಿಸಲು ಸಿಬಿಐ ವಿಫಲವಾದುದರಿಂದ ಆತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶಂಕಿತ ಆರೋಪಿ ಸಂತೋಷರಾವ್‌ನನ್ನು ಇತ್ತೀಚೆಗೆ ದೋಷಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿರುತ್ತದೆ.

ಸದ್ರಿ ಪ್ರಕರಣದ ಬಗ್ಗೆ ಸೌಜನ್ಯಳ ಹೆತ್ತವರು ಹಾಗೂ ಕುಟುಂಬವರ್ಗ ಹಾಗೂ ನಮ್ಮ ಸಮಾಜ ಬಂಧುಗಳು ಈ ಬಗ್ಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಈ ನಿಟ್ಟಿನಲ್ಲಿ ಸಮಾಜದ ಭಾವನೆಗಳಿಗೆ ಸ್ಪಂದಿಸುವುದು. ನಮ್ಮ ಸಂಘದ ಜವಾಬ್ದಾರಿ ಹಾಗೂ ಕರ್ತವ್ಯವಿರುವುದರಿಂದ ಅಪರಾಧಿಗಳನ್ನು ಕಾನೂನಿನ ಅಡಿಯಲ್ಲಿ ನೀಡಲು ಕಾನೂನಿನ ವ್ಯವಸ್ಥೆಯಲ್ಲಿ ವಿಫಲವಾಗಿದೆ ನಮ್ಮೆಲ್ಲರ ಅಭಿಪ್ರಾಯವಾಗಿರುವುದರಿಂದ ನಾವು ಬೆಳ್ತಂಗಡಿ ತಾಲೂಕಿನ ನಮ್ಮ ಎಲ್ಲ ಸಮಾಜದ ಬಂಧುಗಳ ಪರವಾಗಿ ಸದ್ರಿ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ಮರು ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಹೀನಾಯ ರೀತಿಯಿಂದ ಜೀವ ಕಳೆದುಕೊಂಡಿರುವ ಆತ್ಮಕ್ಕೆ, ಹೆತ್ತವರಿಗೆ ಹಾಗೂ ಕುಟುಂಬ ವರ್ಗಕ್ಕೆ ನ್ಯಾಯವನ್ನು ಕೊಡಿಸುವುದರೊಂದಿಗೆ ಸಜ್ಜನ ಸಮಾಜಕ್ಕೆ ನ್ಯಾಯಾವಾದ ಸಂದೇಶವನ್ನು ಒದಗಿಸಬೇಕಾಗಿ ಈ ಮೂಲಕ ಸಂಬಂಧಪಟ್ಟವರನ್ನು ಮನವಿ ಮಾಡುತ್ತಿದ್ದೇವೆ ಎಂದು ಪದ್ಮ ಗೌಡ ತಿಳಿಸಿದರು..

ಪ್ರತಿಕಾಗೋಷ್ಠಿಯಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷರಾದ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಣಾಲು, , ಸಂ. ಕಾರ್ಯದರ್ಶಿ ಟಿ ಜಯಾನಂದ ಗೌಡ ಪ್ರಜ್ವಲ್, ನಿರ್ದೇಶಕರುಗಳಾದ ಧರ್ಣಪ್ಪ ಗೌಡ ಬಂದಾರು, ವಿಜಯ್ ಕುಮಾರ್ ನ್ಯಾಯತರ್ಪು, ಶ್ರೀ ಭವಾನಿ ಕೆ ಗೌಡ ಮೂಡಾಯೂರು, ಗೋಪಾಲಕೃಷ್ಣ ಗೌಡ ಗುಲ್ಲೋಡಿ, ಯುವರಾಜ್ ಅನಾರ್ ಕರಾಯ, ಹರೀಶ್ ಗೌಡ ಪರಪ್ಪಾಜೆ, ಉಷಾ ದೇವಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಗಣೇಶ್ ಗೌಡ ವಕೀಲರು ಸ್ವಾಗತಿಸಿದರು. ಜತೆಕಾರ್ಯದರ್ಶಿ ಕೆ.ಎಂ. ಶ್ರೀನಾಥ್ , ಧನ್ಯವಾದವಿತ್ತರು.

Leave a Comment

error: Content is protected !!