ವೇಣೂರು ಶ್ರೀ ಧ. ಮಂ. ಐಟಿಐಯ ತರಬೇತಿ ಉದ್ಘಾಟನೆ

Suddi Udaya

ವೇಣೂರು: ಆಧುನಿಕ ತಾಂತ್ರಿಕತೆಯ ಜೊತೆಗೆ ವೈಚಾರಿಕ, ಪ್ರಗತಿಶೀಲ ಮನೋಭಾವವನ್ನು ಬೆಳೆಸಿಕೊಂಡು ಎದುರಾಗುವ ಅವಕಾಶಗಳನ್ನು ಸ್ವೀಕರಿಸಿದಾಗ ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಕೀಳರಿಮೆಯಿಂದ ಹೊರಬಂದು ಸಾಧಿಸುವ ಛಲವಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಬಹುದಾಗಿದೆ. ಯುವಕರು ಅವಕಾಶದ ಸದ್ಬಳಕೆಯನ್ನು ಮಾಡಬೇಕೆಂದು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‍ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಅವರು ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯ ತರಬೇತಿಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಎಂ.ವೈ ಹರೀಶ್ ವಹಿಸಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಿಸ್ತು, ಸಮಯಪಾಲನೆ, ದಕ್ಷತೆಗಳ ಇಂದಿನ ಯುವಕರ ಜೀವನ ರೂಪಿಸುವಲ್ಲಿ ಯಶಸ್ವಿಯಾಗಿದೆ. ಕಲಿಯುವಿಕೆಯಲ್ಲಿ ತೊಡಗಿಸಿಕೊಂಡು ಜ್ಞಾನವನ್ನು ಪರಿಪರಿಸುತ್ತಿದ್ದರೆ ಯಾವುದೇ ತೊಡರುಗಳು ನಮ್ಮನ್ನು ತಡೆಯಲು ಅಸಾಧ್ಯ ಎಂದು ಹೇಳಿದರು.


ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಂಜುಶ್ರೀ ಎಂಟರ್‍ಪ್ರೈಸಸ್ ಎಂಬ ಬೃಹತ್ ಉದ್ಯಮವನ್ನು ಸ್ಥಾಪಿಸಿ ನೂರಾರು ಯುವಕರಿಗೆ ಉದ್ಯೋಗ ನೀಡಿರುವ ವೇಣೂರು ಐಟಿಐಯ ಹಳೆ ವಿದ್ಯಾರ್ಥಿ ಸುಧಾಕರ್ ಪೂಜಾರಿಯವರು ತಮ್ಮ ಯಶಸ್ಸಿನ ಶ್ರೇಯ ಈ ಸಂಸ್ಥೆಗೆ ಸೇರಬೇಕಾದುದೆಂದು ಹೇಳಿ ಭವಿಷ್ಯದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸಂಸ್ಥೆಯ ಪರವಾಗಿ ಸುಧಾಕರ ಪೂಜಾರಿಯವರನ್ನು ಸನ್ಮಾನಿಸಲಾಯಿತು.


ವೇಣೂರು ವರ್ತಕರ ಸಂಘದ ಅಧ್ಯಕ್ಷ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಸದಸ್ಯ ಭಾಸ್ಕರ ಪೈ, ವೇಣೂರಿನ ಪದ್ಮಾಂಬ ಸಮೂಹ ಸಂಸ್ಥೆಗಳ ಮಾಲಕರು ಐಟಿಐಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿನರಾಜ್ ಜೈನ್ ರವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿದರು.


ಐಟಿಐಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಾಗೇಶ್ ಉಡುಪ ಪ್ರಾರ್ಥನೆಯನ್ನು ನೆರವೇರಿಸಿದರು. ಸತೀಶ್ ವಂದನಾರ್ಪಣೆಗೈದರು. ಪದ್ಮಪ್ರಸಾದ್ ಬಸ್ತಿ ಕಾರ್ಯಕ್ರಮವನ್ನು ಆಯೋಜಿಸಿ ನಿರೂಪಣೆಗೈದರು. ನೂತನ ವಿದ್ಯಾರ್ಥಿಗಳ ಜತೆಯಲ್ಲಿ ಅವರ ಹೆತ್ತವರು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment

error: Content is protected !!