ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ ತೇಜೋವಧೆ: ಮಾಜಿ ಶಾಸಕ ಕೆ.ವಸಂತ ಬಂಗೇರ ಅಭಿಮಾನಿಗಳಿಂದ ಠಾಣೆಗೆ ದೂರು

Suddi Udaya

ಬೆಳ್ತಂಗಡಿ: ವಸಂತ ಗಿಳಿಯಾರ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ವಸಂತ ಬಂಗೇರರ ವಿರುದ್ಧ ಆಧಾರ ರಹಿತ ಸುಳ್ಳು ಸುದ್ದಿಯನ್ನು ಹರಡಿದ್ದು, ಈ ಸುಳ್ಳು ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರ ಮೇಲೆ ಹಾಗೂ ಇದನ್ನು ತಾಲೂಕಿನಾದ್ಯಂತ ಹರಡಿ ಬಂಗೇರರ ತೇಜೋವಧೆ ಮಾಡಿದವರ ಹಾಗೂ ತಾಲೂಕಿನ ಕೋಮು ಸೌರ್ಹಾತೆಯನ್ನು ಭಂಗ ತರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಅಭಿಮಾನಿ ಬಳಗದವರು ಆ.2ರಂದು ಬೆಳ್ತಂಗಡಿ ಠಾಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.


ದೂರಿನಲ್ಲಿ ಏನಿದೆ..?
ವಸಂತ ಗಿಳಿಯಾರ್ ಎಂಬವರು ಫೇಸ್‌ಬುಕ್ ಜಾಲತಾಣದಲ್ಲಿ ತನ್ನ ವಸಂತ ಗಿಳಿಯಾರ್ ಎಂಬ ಖಾತೆಯಲ್ಲಿ ಒಂದು ಪೋಸ್ಟ್‌ನ್ನು ಹಾಕಿದ್ದು, ಯಾವುದೇ ಆಧಾರ ಇಲ್ಲದೆ ಮಾನ ಹಾನಿ ಮಾಡುವ ಉದ್ದೇಶದಿಂದ ‘ನಾನು ಮೈಸೂರಿಗೆ ಹೋದಾಗ ಒಂದು ಘಟನೆ ನಡೆಯುತ್ತದೆ. ಅಲ್ಲಿ ಒಡನಾಡಿ ಸ್ಟ್ಯಾಲ್ನಿಗೆ ನಮ್ಮ ತಿಮರೋಡಿಯವರು ಮೊಬೈಲ್‌ನಿಂದ ವಸಂತ ಬಂಗೇರರು ಕಾಲ್ ಮಾಡ್ತಾರೆ. ವಸಂತ ಬಂಗೇರರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಧರ್ಮಸ್ಥಳಕ್ಕೆ ಬಹಳ ನಡಕೊಂಡಿದ್ದವರು, ಬಹುಶಃ ಧರ್ಮಸ್ಥಳಕ್ಕೆ ಹ್ಯಾಗೆ ಉಲ್ಟ ಆಗ್ತಾರೆ ಅಂತ ಹೇಳಿದ್ರೆ ಅಭಯಚಂದ್ರರು ಮಿನಿಸ್ಟರ್ ಆದ್ರು, ವಸಂತ ಬಂಗೇರರು ಮಿನಿಸ್ಟರ್ ಆಗಲಿಲ್ಲ ಎನ್ನುವ ಒಂದು ನೋವು ಸಂಕಟವು ಅವರಿಗೆ ಇರಬಹುದು. ನಮ್ಮಲ್ಲಿ ರೆಕಾರ್ಡ್ ಆಗಿದೆ. ಒಡನಾಡಿ ಸಂಸ್ಥೆಯವರಿಗೆ ಸ್ಟ್ಯಾಲ್ನಿ ಹೇಳ್ತಾರೆ ಹಂದಿಯನ್ನು ಹ್ಯಾಗ್ ಹೊಡಿಗೇಕು ಹಾಗೆ ಎಲ್ಲರೂ ಸೇರಿ ಹೊಡಿಯೊಣ ಎಂದು ನಮ್ಮ ಧರ್ಮ ಕ್ಷೇತ್ರದ ಬಗ್ಗೆ ಇವರಾಡುವ ಮಾತು ನನಗೆ ಅಲ್ಲಿ ಒಂದು ಅನುಮಾನ ಉಂಟಾಗಲು ಪ್ರಾರಂಭವಾಯಿತು. ಇವರೆಲ್ಲ ಇವರ ವೈಯಕ್ತಿಕವಾದ ದ್ವೇಷವನ್ನು ಧಾರ್ಮಿಕ ಸಾನಿಧ್ಯದ ಮೇಲೆ ಇಟ್ಕೋಂಡು ದಾರಿ ತಪ್ಸಿ ಏನೇನೋ ಮಾಡ್ಲಿಕ್ಕೆ ಹೊರಟಿದ್ದಾರೆ ಎಂದು ಹೇಳಿದ್ದು, ಈ ಪೋಸ್ಟ್‌ನ್ನು ಆಧಾರವಾಗಿಟ್ಟು ಬೆಳ್ತಂಗಡಿ ತಾಲೂಕಿನಾದ್ಯಂತ ಹಲವು ವ್ಯಕ್ತಿಗಳು ಪ್ರಚಾರ ಮಾಡಿ ನನಗೆ ಮಾನ ಹಾನಿ ಮಾಡುವ ಕೆಲಸ ಮಾಡುತ್ತಿದ್ದಾರೆ.


ನಾನು ಈ ವಿಡಿಯೋ ತುಣುಕಿನಲ್ಲಿ ಹೇಳಿದಂತೆ ತಿಮರೋಡಿಯವರ ಮೊಬೈಲ್‌ನಿಂದ ಸ್ಟ್ಯಾಲ್ನಿಯವರಿಗೆ ಯಾವುದೇ ಕರೆಯನ್ನು ಮಾಡಿಲ್ಲ, ಹಾಗೂ ಧರ್ಮಸ್ಥಳ ಕ್ಷೇತ್ತದ ಬಗ್ಗೆ ಯಾವುದೇ ಮಾತುಗಳನ್ನು ಹೇಳಿರುವುದಿಲ್ಲ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ನನಗೆ ಅಪಾರ ನಂಬಿಕೆ ಇದ್ದು, ಜನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಯಾವುದೇ ಮಾತನ್ನು ಆಡಿರುವುದಿಲ್ಲ. ನನ್ನ ಹೆಸರನ್ನು ಅನಾವಶ್ಯಕವಾಗಿ ಬಳಸಿ ನನ್ನ ತೇಜೋವದೆಯನ್ನು ಮಾಡಲು ಎದುರುದಾರರು ಪ್ರಯತ್ನಿಸುತ್ತಿದ್ದಾರೆ ಎದುರುದಾರರು ನನ್ನ ವಿರುದ್ಧ ಮಾಡಿರುವ ಈ ಅಪಾದೆಯು ಸಂಪೂರ್ಣ ಸುಳ್ಳಾಗಿರುತ್ತದೆ. ಇದನ್ನು ಪೋಸ್ಟ್ ಮಾಡಿರುವ ಎದುರುದಾರರು ಮತ್ತು ಇದನ್ನು ತಾಲೂಕಿನಾದ್ಯಂತ ಹರಡಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಬಂಗೇರರು ದೂರಿನಲ್ಲಿ ಒತ್ತಾಯಿಸಿದ್ದಾರೆ.


ದೂರು ನೀಡುವ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿ.ಪಂ ಮಾಜಿ ಸದಸ್ಯರುಗಳಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ಮನೋಹರ ಇಳಂತಿಲ, ಬಿ.ಕೆ ವಸಂತ, ಇಸುಬು ಇಳಂತಿಲ, ವಿಶ್ವನಾಥ ಕೊಲ್ಲಾಜೆ, ಈಶ್ವರ ಭಟ್ ಎಂ., ಸಂತೋಷ್, ಬೊಮ್ಮಣ್ಣ ಗೌಡ, ಸತೀಶ್ ಹೆಗ್ಡೆ ವೇಣೂರು, ಪ್ರಭಾಕರ ಅಟ್ಟಾಜೆ, ರಾಜಶೇಖರ ಶೆಟ್ಟಿ, ಶ್ರೀಮತಿ ಯಶೋಧ ಕುತ್ಲೂರು, ವಸಂತಿ ಸಿ. ಪೂಜಾರಿ, ಸಂಜೀವ ಪೂಜಾರಿ ಕೊಡಂಗೆ, ಗೋಪಿನಾಥ ನಾಯಕ್, ರವಿ ಕೋಟ್ಯಾನ್, ರಾಕೇಶ್ ಪೂಜಾರಿ ಮೂಡುಕೋಡಿ, ಜಿನ್ನಪ್ಪ ಪೂಜಾರಿ ಕಾಪಿನಡ್ಕ, ಉಮೇಶ್ ಬಂಗೇರ ಕಾಪಿನಡ್ಕ, ರವೀಂದ್ರ ಬಿ. ಅಮಿನ್, ಸಚಿನ್ ನೂಜೋಡಿ, ಅಯೂಬ್ ಡಿ.ಕೆ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!