ಅರಸಿನಮಕ್ಕಿ ಸ. ಪ್ರೌ. ಶಾಲೆಯಲ್ಲಿ ಸ್ವಾತಂತ್ಯೋತ್ಸವ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ – ಸನ್ಮಾನ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ : ಸ್ವಾರ್ಥರಹಿತ ಬದುಕು ನಮ್ಮದಾಗಬೇಕು. ದೇಶದಿಂದ ನಮಗೇನು ಸಿಕ್ಕಿದೆ ಎಂದು ಆಲೋಚಿಸದೆ ದೇಶಕ್ಕಾಗಿ ನಾವೇನು ಮಾಡಬಹುದು ಎಂದು ಚಿಂತನೆ ನಡೆಸಬೇಕು ಎಂದು ನಿವೃತ್ತ ಯೋಧ ಕೆ. ಮಹಾಬಲ ಮುದ್ದಿಗೆ ಕರೆ ನೀಡಿದರು.


ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆದ ಪ್ರತಿಭಾ ಪುರಸ್ಕಾರ – ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ನಾವೆಲ್ಲ ಜಾತಿ, ಮತ ಭೇದಗಳನ್ನು ತೊರೆದು ಭಾರತೀಯರೆಂಬ ವಿಶಾಲ ಮನೋಭಾವವನ್ನು ಬೆಳೆಸಿಕೊಂಡು ಬಲಿಷ್ಠ, ಸಮೃದ್ಧ ಭಾರತ ನಿರ್ಮಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.


ಅರಸಿನಮಕ್ಕಿ ಗ್ರಾ.ಪಂ.ನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಭಾರತ ಸ್ವಾತಂತ್ರ್ಯ ಪಡೆಯಲು ಅನೇಕ ಮಹಾನ್ ಹೋರಾಟಗಾರರು ತ್ಯಾಗ, ಬಲಿದಾನವನ್ನು ಮಾಡಿದ್ದಾರೆ. ದೇಶಸೇವೆಗೆ ನಿರ್ದಿಷ್ಟ ಚೌಕಟ್ಟಿಲ್ಲ. ಸಮಾಜದಲ್ಲಿರುವ ಬಡವರು, ಅಸಹಾಯಕರಿಗೆ ನೆರವು ನೀಡುವುದೂ ದೇಶ ಸೇವೆಗೆ ಸಮ. ಇತಿಹಾಸವನ್ನು ಅರಿತಾಗ ಮಕ್ಕಳು ಜವಾಬ್ದಾರಿಯುತ ಸತ್ಪ ಪ್ರಜೆ ಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.


ಪತ್ರಕರ್ತ ವೃಷಾಂಕ್ ಖಾಡಿಲ್ಕರ್ ಮಾತನಾಡಿ, ಮಾತೃ ಋಣ, ಪಿತೃ ಋಣ, ಆಚಾರ್ಯ ಋಣದಂತೆ ಸಮಾಜ ಋಣವೂ ಪ್ರತಿಯೊಬ್ಬ ವ್ಯಕ್ತಿಯ ಮೇಲಿರುತ್ತದೆ. ಆ ಋಣವನ್ನು ತೀರಿಸುವ ಕೆಲಸವನ್ನು ಮಾಡಬೇಕು. ಸಮಾಜ, ದೇಶಕ್ಕಾಗಿ ಬದುಕುವ ವ್ಯಕ್ತಿಯ ಹೆಸರು ಜನಮಾನಸದಲ್ಲಿ ಅಜರಾಮರವಾಗಿ ಉಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ತನಿಯಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಪ್ರೇಮಚಂದ್ರ ಕೆ., ಲಾವಣ್ಯ, ಎಸ್‌ಡಿಎಂಸಿ ಸದಸ್ಯೆ ಲತಾ, ಯೋಧ ಮಹಾಬಲ ಕೆ. ದಂಪತಿ ಉಪಸ್ಥಿತರಿದ್ದರು.


ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರ ಸ್ವಾಗತಿಸಿ ವಂದಿಸಿದರು. ಪ್ರಾಧ್ಯಾಪಕರಾದ ಮಾಲತಿ ಮತ್ತು ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!