ವಾಣಿ ಕಾಲೇಜು: ಸಮಾನ ನಾಗರಿಕ ಸಂಹಿತೆ ಮಾಹಿತಿ ಉಪನ್ಯಾಸ

Suddi Udaya

ಬೆಳ್ತಂಗಡಿ: ದೇಶದಲ್ಲಿ ಸಂಸ್ಕೃತಿ, ಜನಾಂಗ, ಭಾಷೆ ಮತ್ತು ಕಾನೂನಿನಲ್ಲಿ ಕಂಡುಬರುವ ಗೊಂದಲ ನಿವಾರಣೆಯಾಗಬೇಕಾದರೆ ಸಮಾನ ನಾಗರಿಕ ಸಂಹಿತೆ ಜಾರಿಯಾಗಲೇಬೇಕು ಎಂದು ಬೆಳ್ತಂಗಡಿಯ ನ್ಯಾಯವಾದಿಗಳಾದ ಧನಂಜಯ ರಾವ್ ಬಿ.ಕೆ. ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸಾಕ್ಷರತಾ ಸಂಘ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜರುಗಿದ ಸಮಾನ ನಾಗರಿಕ ಸಂಹಿತೆ ವಿಷಯದ ಕುರಿತು ಮಾತನಾಡುತ್ತಾ, ನಮ್ಮ ದೇಶದಲ್ಲಿ ಎಲ್ಲಾ ರೀತಿಯ ಹಕ್ಕುಗಳನ್ನು ತಿಳಿದುಕೊಂಡಂತೆ ಕರ್ತವ್ಯವನ್ನು ಕೂಡ ಪಾಲಿಸಬೇಕು. ರಾಷ್ಟ್ರ, ರಾಷ್ಟ್ರಗೀತೆ, ಸಂವಿಧಾನ, ರಾಷ್ಟ್ರನಾಯಕರು, ಭಾಷೆ, ಸಂಸ್ಕೃತಿ ಇದೆಲ್ಲವನ್ನು ಗೌರವಿಸಿ ನಡೆಯುವುದು ನಮ್ಮ ಕರ್ತವ್ಯವಾಗಿದೆ. ದೇಶದ ಏಕರೂಪವಾಗಿ ಸಹಬಾಳ್ವೆಯಿಂದ ಬದುಕುವ ಅವಕಾಶ ಇರಬೇಕು. ಇದರಿಂದ ದೇಶದಲ್ಲಿ ಸುಭದ್ರತೆ ನೆಲೆಗೊಳ್ಳಲು ಸಾಧ್ಯವಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಗಣೇಶ್ ಗೌಡ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ ಸ್ವಾಗತಿಸಿದರು. ಕಾನೂನು ಸಾಕ್ಷರತಾ ಸಂಘದ ಸಂಯೋಜಕರಾದ ಶ್ರೀಮತಿ ಮೀನಾಕ್ಷಿ ವಂದಿಸಿದರು. ಕು|ಸನುಷಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!