ಕಾಡಾನೆ ಹಾವಳಿ ಕುರಿತು ಧರ್ಮಸ್ಥಳದಲ್ಲಿ ಅರಣ್ಯಾಧಿಕಾರಿಗಳಿಗೆ ಮನವಿ

Suddi Udaya

ಧರ್ಮಸ್ಥಳ : ಧರ್ಮಸ್ಥಳ ಗ್ರಾಮದ ನೇರ್ತನೆ ಪರಿಸರದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ  ಗ್ರಾಮ ಪಂಚಾಯತ್  ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನಾ ಸಭೆ ಸೆ 15 ರಂದು  ಧರ್ಮಸ್ಥಳ ಗ್ರಾಮ ಪಂಚಾಯತು ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್  ನೇರ್ತನೆ ಪರಿಸರದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ತುರ್ತಾಗಿ ನಡೆಸಲಾಗುವುದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ತಕ್ಷಣ ಕಾರ್ಯಾಚರಣೆ ಆರಂಭಿಸುವುದಾಗಿ ತಿಳಿಸಿದರು.                                                                     

ನಿರಂತರವಾಗಿ ಆನೆ ದಾಳಿ ನಡೆಸುತ್ತಿರುವ ಅರಣ್ಯದ ಅಂಚಿನಲ್ಲಿರುವ ಪ್ರದೇಶಗಳಲ್ಲಿ ಸೋಲಾರ್ ಬೇಲಿ ಅಳವಡಿಕೆಗೆ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು. ಸೋಲಾರ್ ಬೇಲಿಗೆ  ಸರಕಾರ ಅನುದಾನ ಒದಗಿಸುತ್ತಿದ್ದು ಅನುದಾನ ಬಂದರೆ ಕೂಡಲೇ  ಅಳವಡಿಸುವುದಾಗಿ  ತಿಳಿಸಿದರು. ಕೃಷಿಕರು ತಾವೇ  ಸ್ವತಹ ಸೋಲಾರ್ ಬೇಲಿ ಅಳವಡಿಸುವುದಿದ್ದರೆ ಅರಣ್ಯ ಇಲಾಖೆಯಿಂದ ಸಹಾಯಧನ ಒದಗಿಸುವುದಾಗಿಯೂ ಮಾಹಿತಿ ನೀಡಿ , ಇಲಾಖೆಯೊಂದಿಗೆ ನಾಗರಿಕರೂ  ಸಹಕರಿಸುವಂತೆ ವಿನಂತಿಸಿದರು.


   ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಕಾಡಾನೆಗಳನ್ನು ಓಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು . ಇದಕ್ಕೆ ಗ್ರಾಮ ಪಂಚಾಯತಿನಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
 ಗ್ರಾಮಸ್ಥರು ಕಾಡಾನೆಗಳು ರಸ್ತೆಯಲ್ಲಿಯೇ ಓಡಾಡುತ್ತಿದ್ದು ಜನರಲ್ಲಿ ಭಯ ಮೂಡಿಸಿದ್ದು ಅಪಾಯಕಾರಿ ಸ್ಥಿತಿ ಇರುವುದರಿಂದ ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು.  ಆನೆಗಳು ಕೃಷಿ ಭೂಮಿಗೆ ಬರದಂತೆ ಆನೆ ಕಂದಕ ನಿರ್ಮಿಸಬೇಕು, ಕಾಡಾನೆಗಳಿಂದ ಕೃಷಿ ಹಾನಿಗೀಡಾದವರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ವಲಯ ಅರಣ್ಯಾಧಿಕಾರಿಗಳಿಗೆ  ಮನವಿ ಸಲ್ಲಿಸಿದರು.


ಸಭೆಯಲ್ಲಿ ಗ್ರಾಮಪಂಚಾಯತು ಅಧ್ಯಕ್ಷೆ ವಿಮಲ , ಅಭಿವೃದ್ಧಿ ಅಧಿಕಾರಿ ಉಮೇಶ್, ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರೀತಂ ಡಿ, ಗ್ರಾಮ ಪಂಚಾಯತು ಸದಸ್ಯರುಗಳು, ಉಪವಲಯ ಅರಣ್ಯಾಧಿಕಾರಿಗಳಾದ  ಹರಿಪ್ರಸಾದ್, ಯತೀಂದ್ರ  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!