ಸಿಯೋನ್ ಆಶ್ರಮ : ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ

Suddi Udaya

Updated on:

ಗಂಡಿಬಾಗಿಲು: ಸಿಯೋನ್, ಆಶ್ರಮ, ಟ್ರಸ್ಟ್(ರಿ.) ಗಂಡಿಬಾಗಿಲು ಇಲ್ಲಿ ಅ.02 ರಂದು ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಜಂಟಿಯಾಗಿ ಸಂಭ್ರಮದಿಂದ ಆಚರಿಸಲಾಯಿತು.

ಸಭೆಯ ಅಧ್ಯಕ್ಷ ಸ್ಥಾನವನ್ನಲಂಕರಿಸಿದ್ದ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿಯವರಾದ ಡಾ.ಯು.ಸಿ. ಪೌಲೋಸ್‌ ರವರು ಗಾಂಧೀಜಿಯವರ ತ್ಯಾಗ-ಬಲಿದಾನ, ಪ್ರೀತಿ- ಸತ್ಯ-ಅಹಿಂಸಾಮಾರ್ಗದ ಮೂಲಕ ಸ್ವಾತಂತ್ರ್ಯ ದೊರಕಿಸಿಟ್ಟ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಗಾಂಧೀಜಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕೋಣ, ಹಿರಿಯರನ್ನು ಗೌರವಿಸಿ, ನೆಮ್ಮದಿಯ ಬದುಕು ಕಲ್ಪಿಸಿಕೊಡುವುದರಿಂದ ಮಾನವ ಜನ್ಮ ಸಾರ್ಥಕವಾಗಿಸಬಹುದೆಂದರು, ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸುವ ಪ್ರಾಮುಖ್ಯತೆ ವಿವರಿಸಿದರು ಹಾಗೂ ಸಿಯೋನ್ ಆಶ್ರಮದಲ್ಲಿ ಯಾವುದೇ ಜಾತಿ-ಮತ, ಬೇಧ-ಭಾವವಿಲ್ಲದೇ ಬೇರೆ ಬೇರೆ ಧರ್ಮದ ಮೂವರು ಹಿರಿಯ ನಾಗರೀಕರನ್ನು ಗುರುತಿಸಿ, ಪ್ರತಿ ವರ್ಷ ಸನ್ಮಾನಿಸಲಾಗುವುದೆಂದು ತಿಳಿಸಿದರು.

ನೆರಿಯ ಗ್ರಾಮದ ಹಿರಿಯ ನಾಗರಿಕರಾದ ಸಿ.ವಿ.ಚಾಂಡಿ ಬೆರಳಿಗರ ಚೆರಙಗರಪುತ್ತನ್‌ಪುರ, ಶ್ರೀಮತಿ ನಾಗಮ್ಮ ಉಂಬಾಜೆ ಹಾಗೂ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯ ಸಿ.ಜೆ.ಅಹಮ್ಮದ್ ಕುಂಞಿ ಇವರುಗಳನ್ನು ಪ್ರಮಾಣ ಪತ್ರ, ಫಲಪುಷ್ಪಗಳೊಂದಿಗೆ, ಪೇಟಾ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಟ್ರಸ್ಟಿ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು ಹಾಗೂ ಆಶ್ರಮ ನಿವಾಸಿಯಾದ ಉಮೇಶ್‌ರವರು ವೇದಿಕೆಯನ್ನಲಂಕರಿಸಿದ್ದರು. ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಸಿಯೋನ್ ಆಶ್ರಮದ ಹಿರಿಯ ನಾಗರಿಕರಿಗೆ ಒಳಾಂಗಣ ಆಟಗಳನ್ನುಏರ್ಪಡಿಸಲಾಗಿದ್ದು, ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಿಯೋನ್ ಆಶ್ರಮದ ಮ್ಯಾನೇಜರ್ ಶ್ರೀಮತಿ ಸಂಧ್ಯಾಸುಭಾಷ್‌ರವರು, ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮ ನಿವಾಸಿಗಳೆಲ್ಲರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಯವರಾದ ಶ್ರೀಮತಿ ದಿನವತಿಯವರು ಸ್ವಾಗತಿಸಿ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಶೋಭಾ ಯು.ಪಿ.ಯವರು ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!