ಕಳೆಂಜ ಅಮ್ಮಿನಡ್ಕ ಲೋಲಾಕ್ಷರ ಮನೆ ಪಂಚಾಂಗ ಕೆಡವಿದ ಪ್ರಕರಣ : ಆರಂಭಗೊಂಡ ಕಂದಾಯ – ಅರಣ್ಯ ಜಂಟಿ ಸರ್ವೆ

Suddi Udaya

ಕಳೆಂಜ: ಕಳೆಂಜ ಗ್ರಾಮದ ಅಮ್ಮಿನಡ್ಕ ಲೋಲಾಕ್ಷರ ಮನೆ ಪಂಚಾಂಗ ಅರಣ್ಯ ಇಲಾಖೆ ಅಧಿಕಾರಿಗಳು ಕೆಡವಿದ ಪ್ರಕರಣ ವಿವಾದಕ್ಕೆ ಕಾರಣವಾಗಿ, ಜನಪ್ರತಿ ನಿಧಿಗಳು ಮತ್ತು ಅರಣ್ಯ ಅಧಿಕಾರಿಗಳ ನಡುವೆ ಉಂಟಾದ ಜಟಾಪಟಿಯಲ್ಲಿ, ಅಂತಿಮವಾಗಿ ನಡೆದ ನಿಧಾ೯ರವಾದಂತೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೆ ಅ.11ರಂದು ಆರಂಭಗೊಂಡಿದೆ.


ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೇ ನಂಬರ್ 309ರ ಅಂದರೆ ನಿಡ್ಲೆ ವಿಕೃತ ಬ್ಲಾಕ್ 2ರ ಮತ್ತು ಕಳೆಂಜ ವಿಕೃತ ಬ್ಲಾಕ್ ನ ಜಂಟಿ ಸರ್ವೆ ಕಾರ್ಯವು ಇಂದು ಬೆಳಿಗ್ಗೆ ಆರಂಭಗೊಂಡಿತು.
ಎಡಿಎಲ್ ಆರ್ ರೇಣುಕಾ ನಾಯಕ್, ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮಣಿ, ಗ್ರಾಮ ಲೆಕ್ಕಾಧಿಕಾರಿ
ಪ್ರಥ್ವಿರಾಜ್ ಪಿ. ಶೆಟ್ಟಿ, ಸರ್ವೆ ಅಧಿಕಾರಿಗಳಾದ ರಮೇಶ್, ಗುರುನಾಥ್ , ಉಪ್ಪಿನಂಗಡಿ ವಲಯ ಅಧಿಕಾರಿ ಜಯಪ್ರಕಾಶ್, ಗ್ರಾಮ ಸಹಾಯಕ ಯತೀಂದ್ರ‌ ಉಪಸ್ಥಿತಿಯಲ್ಲಿ ಎಡಿಎಲ್‌ಆರ್ ಸರ್ವೆ ಮೂಲಕ ಸುಮಾರು 8,446 ಎಕರೆಯಷ್ಟು ಪ್ರದೇಶವನ್ನು ಸರ್ವೆ ಮಾಡುವ ಕಾಯ೯ವನ್ನು ನಡೆಸುತ್ತಿದ್ದಾರೆ.

ಕಳೆಂಜ ಗ್ರಾಮದ ಅಮ್ಮಿನಡ್ಕ ಕುದ್ದ ಲೋಲಾಕ್ಷ ರವರ ಹೊಸ ನಿರ್ಮಾಣದ ಮನೆಯ ಫೌಂಡೇಶನ್ ಅನ್ನು ಅರಣ್ಯ ಇಲಾಖೆಯ ಒತ್ತುವರಿ ಜಾಗವೆಂದು ಅ.6ರಂದು ಅರಣ್ಯ ಅಧಿಕಾರಿಗಳು ತೆರವುಗೊಳಿಸಿದ್ದರು.
ಈ ಸಂಬಂಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅ.7ರಂದು ಸ್ಥಳಕ್ಕೆ ಆಗಮಿಸಿ ಜಂಟಿ ಸರ್ವೆ ನಡೆಸಿ, ಸರ್ವೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವೆಂದಾದರೆ ತೆರವುಗೊಳಿಸಿ, ಜಂಟಿ ಸರ್ವೆ ಆಗದೆ ಹೋದಲ್ಲಿ ತೆರವುಗೊಳಿಸಲು ಬಿಡುವುದಿಲ್ಲ ಎಂದು ತಮ್ಮ ಮುಂದಾಳತ್ವದಲ್ಲಿಯೇ ನೂತನ ಮನೆಯ ನಿರ್ಮಾಣದ ಜಾಗದಲ್ಲಿಯೇ ಶೆಡ್ ಅನ್ನು ನಿರ್ಮಿಸಿದ್ದರು. ಜಾಗವನ್ನು ಒತ್ತುವರಿ ನಡೆಸಿದವರು ಹಾಗೂ ಇದಕ್ಕೆ ಸಹಕರಿಸಿದ 11 ಜನರ ವಿರುದ್ಧ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿಗಳು ಧರ್ಮಸ್ಥಳ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇದೇ ಪ್ರಕರಣದಲ್ಲಿ ಮನೆಯವರು ನೀಡಿದ ದೂರಿನಂತೆ ಆರ್.ಎಫ್.ಓ ಮತ್ತು ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲಾಗಿತ್ತು
ಅಕ್ಟೋಬರ್ 9ರಂದು ಮತ್ತೆ ಅರಣ್ಯ ಅಧಿಕಾರಿಗಳು ಈ ಶೆಡ್ ನ ತೆರವು ಕಾರ್ಯಕ್ಕೆ ಮುಂದಾಗಿದ್ದರು.

ಈ ಸಂದರ್ಭ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಎಂಎಲ್ಸಿ ಹಿಂದೂ ಮುಖಂಡರು ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಶೆಡ್ ತೆರವುಗೊಳಿಸದಂತೆ ಬೆಳ್ತಂಗಡಿ ಶಾಸಕರ ಜತೆಯಾಗಿದ್ದರು. ಅರಣ್ಯ ಅಧಿಕಾರಿಗಳು ಶೆಡ್ ತೆರವು ಗೊಳಿಸಲು ಮುಂದಾದ ಸಂದರ್ಭ ಜನಪ್ರತಿನಿಧಿಗಳು ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಅರಣ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಹಲವು ಗಂಟೆಗಳ ಕಾಲ ವಾಗ್ವಾದ , ಜಟಾಪಟಿ ನಡೆದಿತ್ತು.


ಈ ಸಂದರ್ಭ ಶಾಸಕರುಗಳು ಜಂಟಿಸರ್ವೆಗೆ ಒತ್ತಾಯಿಸಿದ್ದು, ಒಂದು ವೇಳೆ ಅರಣ್ಯ ಇಲಾಖೆಗೆ ಸೇರಿದ ಜಾಗ ಇದಾದರೆ, ತಾವೇ ಖುದ್ದಾಗಿ ಶೆಡ್ ನ್ನು ತೆರೆವುಗೊಳಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಲೋಲಾಕ್ಷರ ಮನೆ ನಿರ್ಮಾಣದ ಜಾಗ ಕಂದಾಯವೇ ಅಥವಾ ಅರಣ್ಯ ಇಲಾಖೆ ಸೇರಿದ ಜಾಗವೇ ಎಂಬುದು ಕೂತುಹಲಕ್ಕೆ ಕಾರಣವಾಗಿದೆ. ಪೂರ್ತಿ ಸವೇ೯ ಬಳಿಕವಷ್ಟೇ ಸ್ವಷ್ಟ ವಿಚಾರ ತಿಳಿದು ಬರಲಿದೆ.

Leave a Comment

error: Content is protected !!