ಬಳಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ವರ್ಗಾವಣೆ: ಪಂಚಾಯತ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳಿಂದ ಬಿಳ್ಕೋಡುಗೆ ಸಮಾರಂಭ

Suddi Udaya

ಬಳಂಜ: ಬಳಂಜ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಬೇರೆ ಜಿಲ್ಲೆಗೆ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದು ಅವರಿಗೆ ಬಿಳ್ಕೋಡುಗೆ ಸಮಾರಂಭವು ಅ. 31 ರಂದು ಬಳಂಜ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.

ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀನಿವಾಸ್ ಅವರು ಮಾಡಿದ ಕೆಲಸ ಕಾರ್ಯಗಳಿಂದ ಪಂಚಾಯತ್ ಗೆ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ನಿಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಕೆಗಳು ಎಂದರು.

ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರು, ಮಾಜಿ ಮಂಡಲ ಪಂಚಾಯತ್ ಅಧ್ಯಕ್ಷರಾದ ಕೆ.ವಸಂತ ಸಾಲಿಯಾನ್ ಮಾತನಾಡಿ ಪಂಚಾಯತ್ ನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅಧಿಕಾರಿ ಶ್ರೀನಿವಾಸ್ ಅವರ ಶ್ರಮ ಬಹಳಷ್ಟು ಇದೆ. ಮುಂದಿನ ಜೀವನಕ್ಕೆ ಶುಭ ಹಾರೈಕೆಗಳು ಎಂದರು.

ತಾ.ಪಂ ಮಾಜಿ ಸದಸ್ಯರು, ಸಮಾಜಸೇವಕರಾದ ಹೆಚ್.ಧರ್ಣಪ್ಪ ಪೂಜಾರಿ ಮಾತನಾಡಿ ಪಂಚಾಯತ್ ಗೆ ಶ್ರೀನಿವಾಸ್ ಅವರು ಅಧಿಕಾರಿಯಾಗಿ ಬಂದ ಮೇಲೆ ಪಂಚಾಯತ್ ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಲವಾರು ಅಭಿವೃದ್ಧಿ ಕಾರ್ಯಗಳು, ಶಾಶ್ವತ ಯೋಜನೆಗಳು ನಡೆದಿದೆ. ಅವರ ಶ್ರಮದಿಂದ ಹಲವಾರು ಪ್ರಶಸ್ತಿಗಳು ಪಂಚಾಯತ್ ಗೆ ಸಿಕ್ಕಿದೆ ಎಂದರು.

ವೇದಿಕೆಯಲ್ಲಿ ಬಳಂಜ ಗ್ರಾ.ಪಂ ಉಪಾಧ್ಯಕ್ಷ ಯಶೋಧರ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನವರು ಶ್ರೀನಿವಾಸ್ ಅವರನ್ನು ಸನ್ಮಾನಿಸಿದರು.ಹಾಗೂ ತಾ.ಪಂ ಉದ್ಯೋಗ ಖಾತರಿ ತೋಟಗಾರಿಕ ಇಂಜಿನಿಯರ್ ಪೂರ್ಣಿಮಾ,ಉದ್ಯೋಗ ಖಾತರಿ ಇಂಜಿನಿಯರ್ ರಂಜನ್ ಇವರನ್ನು ಗೌರವಿಸಲಾಯಿತು.
ಪಂಚಾಯತ್ ಸದಸ್ಯರು, ಊರವರು, ಸಿಬ್ಬಂದಿಗಳು ಸಹಕರಿಸಿದರು.

Leave a Comment

error: Content is protected !!