ಎಮ್.ಆರ್.ಪಿ.ಎಲ್ – ಸಿಎಸ್ಆರ್ ಯೋಜನೆಯಡಿ “ಶ್ರೀ ಕೃಷ್ಣ ಯೋಗಕ್ಷೇಮ” ಅಂಬುಲೆನ್ಸ್ ಹಸ್ತಾಂತರ

Suddi Udaya

ಬೆಳ್ತಂಗಡಿ: ಬೆಂದ್ರಾಳ ವೆಂಕಟಕೃಷ್ಣ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ) ಗೆ “ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಎಮ್.ಆರ್.ಪಿ.ಎಲ್” (ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆ ಮತ್ತು ಓಎನ್ ಜಿಸಿಯ ಅಂಗ ಸಂಸ್ಥೆ) ಇವರ ಸಿಎಸ್ಆರ್ ಯೋಜನೆಯಡಿ ನೀಡಿದ ಹೊಸ ಫೋರ್ಸ್ ಟ್ರ್ಯಾಕ್ಸ್ ಅಂಬುಲೆನ್ಸ್ ವಾಹನವನ್ನು ಎಂ ಆರ್ ಪಿ ಎಲ್ ನ ಅಧಿಕಾರಿ (ಸಿಎಸ್ಆರ್) ಸ್ಟಿವನ್ ಪಿಂಟೊ ಇವರು ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಶ್ರೀ ಕೃಷ್ಣ ಯೋಗಕ್ಷೇಮ ಇದರ ರೂವಾರಿಗಳು ಆದಂತಹ ಡಾ. ಮುರಳಿಕೃಷ್ಣ ಇರ್ವತ್ರಾಯ ಇವರಿಗೆ ಹಸ್ತಾಂತರಿಸಿದರು.


ಜನರಿಗೆ ವೈದ್ಯಕೀಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶ್ರೀ ಕೃಷ್ಣ ಆಸ್ಪತ್ರೆಯ ಸಹಯೋಗದಲ್ಲಿ ಶ್ರೀ ಕೃಷ್ಣ ಯೋಗಕ್ಷೇಮ – ನಿಮ್ಮ ಮನೆಬಾಗಿಲಿಗೆ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿದ್ದು, ಕಳೆದ ಎಂಟು ವರ್ಷಗಳಿಂದ ವೈದ್ಯಕೀಯ ತಂಡ ಸೇವೆಯಲ್ಲಿ ನಿರತವಾಗಿದೆ, ಅನಾರೋಗ್ಯದಿಂದ ಬಳಲುತ್ತಿರುವ, ಹಾಸಿಗೆ ಹಿಡಿದಂತಹ ರೋಗಿಗಳಿಗೆ, ಹಿರಿಯ ನಾಗರಿಕರಿಗೆ ಅವರ ಮನೆಬಾಗಿಲಿಗೆ ವೈದ್ಯರು ಮತ್ತು ದಾದಿಯರ ತಂಡ ಹೋಗಿ ಚಿಕಿತ್ಸೆ ನೀಡುವುದು ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಸಾಗಿಸುವುದು ಆಗಿದೆ. ಶ್ರೀ ಕೃಷ್ಣ ಯೋಗಕ್ಷೇಮ ತಂಡದಲ್ಲಿ ಓರ್ವ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಮತ್ತು ಇಂಟರ್ನಿ ಇರುತ್ತಾರೆ. ವೈದ್ಯರ ಮಾರ್ಗದರ್ಶನದಂತೆ ಡ್ರೆಸ್ಸಿಂಗ್‌, ಐವಿ ಪ್ಲೂಯಿಡ್ ನೀಡುವುದು, ಮಧುಮೇಹ ತಪಾಸಣೆ, ಬಿಪಿ ತಪಾಸಣೆ, ಔಷಧಗಳು, ಅಗತ್ಯವಿರುವ ಚುಚ್ಚುಮದ್ದುಗಳು, ನೆಬ್ಯುಲೈಸೇಶನ್, ಆಮ್ಲಜನಕ, ಹೆಚ್ಚಿನ ಚಿಕಿತ್ಸೆ/ತಪಾಸಣೆಗೆ ರಕ್ತ ಮಾದರಿ ಸಂಗ್ರಹ ಮಾಡಲಾಗುತ್ತದೆ.


ತಂಡವು ಹವಮಾನ ವೈಪರೀತ್ಯ, ನೇರೆ, ಭೂಕುಸಿತಗಳು ಮುಂತಾದ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಸೇವೆ ನೀಡುತ್ತಾ ಬಂದಿದೆ. ಡಾ.ಮುರಳಿಕೃಷ್ಣ ಇರ್ವತ್ರಾಯ ಅವರಲ್ಲಿರುವ ಸಾಮಾಜಿಕ ಕಳಕಳಿ ಮತ್ತು ದೂರದೃಷ್ಟಿಯು ರೋಗಿಯ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ, ಜನರಿಗೆ/ರೋಗಿಗಳಿಗೆ ತಮ್ಮ ಸೇವೆಯನ್ನು ಒದಗಿಸುವ ಮೂಲಕ ತಮ್ಮ ಸೇವಾಕಾರ್ಯವನ್ನು ಸಾಧಿಸಿದ್ದಾರೆ.
ಶ್ರೀ ಕೃಷ್ಣ ಯೋಗ ಕ್ಷೇಮದ ತಂಡದ ಸೇವಾಕಾರ್ಯದಲ್ಲಿ ವಂದನಾ ಎಂ ಇರ್ವತ್ರಯ, ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ವೈದ್ಯಕಿಯ ಅದೀಕ್ಷಕರು, ಡಾ ಅಲ್ಬಿನ್ ಜೋಸೆಫ್ (ಮುಖ್ಯ ವೈದ್ಯಾಧಿಕಾರಿ), ಡಾ.ಮೌಲ್ಯ.(ಸ್ಥಾನಿಕ ವೈದ್ಯರು), ಗಣೇಶ್ (PRO), ಹೈದರ್ ಅಲಿ (ಯೋಗಕ್ಷೇಮ ಕೋ-ಆರ್ಡಿನೇಟರ್), ಮತ್ತು ಇತರ ಎಲ್ಲಾ ಸಿಬ್ಬಂದಿಗಳ ಶ್ರಮವು ಮುಖ್ಯವಾಗಿದೆ.
ಇತ್ತೀಚೆಗೆ ಈ ಯೋಜನೆಯ ಸೇವೆಯನ್ನು ಬೆಳ್ತಂಗಡಿ ತಾಲೂಕು ಮಾತ್ರವಲ್ಲದೆ ನೆರೆಯ ಮೂಡಿಗೆರೆ ತಾಲೂಕಿಗೂ ವಿಸ್ತರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Comment

error: Content is protected !!