ಉಜಿರೆ: ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸಮಾಲೋಚನಾ ಸಭೆ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನಲ್ ಸೊಸೈಟಿ(ರಿ.) ಉಜಿರೆ ಇದರ ಆಡಳಿತಕ್ಕೊಳಪಟ್ಟ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗಾಗಿ, ಆಡಳಿತ ಮಂಡಳಿಯ ವತಿಯಿಂದ ಸಂಯೋಜಿಸಲ್ಪಟ್ಟ ಶೈಕ್ಷಣಿಕ ಸಮಾಲೋಚನಾ ಸಭೆಯು ಇತ್ತೀಚೆಗೆ ಉಜಿರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.

ಶ್ರೀ ಧ ಮಂ ಶಿಕ್ಷಣ ಸಂಸ್ಥೆಗಳ ಕ್ಷೇಮಪಾಲನ ಅಧಿಕಾರಿ ಬಿ. ಸೋಮಶೇಖರ ಶೆಟ್ಟಿಯವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಾಲಾ ಫಲಿತಾಂಶದ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಲು ವಿಷಯಾವಾರು ಶಿಕ್ಷಕರ ಸಮಾಲೋಚನಾ ಸಭೆಯ ಅಗತ್ಯವಿದೆ. ಈ ಮೂಲಕ ವಿಷಯಾವಾರು ಶಿಕ್ಷಕರ ವೇದಿಕೆಯನ್ನು ರಚಿಸಿಕೊಂಡು ಪರಸ್ಪರ ಹಂಚಿಕೊಳ್ಳುವಿಕೆಯ ಮೂಲಕ ಬೋಧನೆಯಲ್ಲಿ ಹೊಸತನ ಅಳವಡಿಸಿಕೊಂಡು, ಶಿಕ್ಷಕರಲ್ಲಿ ಸಮಕಾಲೀನ ಶೈಕ್ಷಣಿಕ ಸವಾಲುಗಳ ನಿರ್ವಹಣೆಯ ಸಾಮರ್ಥ್ಯ ವೃದ್ಧಿ ಇದರಿಂದ ಸಾಧ್ಯ. ಆಡಳಿತ ಮಂಡಳಿಯ ಆಶಯವನ್ನು ಈಡೇರಿಸುವಂತೆ ವಿಷಯ ವೇದಿಕೆಯು ಕಾರ್ಯ ನಿರ್ವಹಿಸಲಿ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಉಜಿರೆ ಕೇಂದ್ರೀಯ ಪಠ್ಯಕ್ರಮದ ಶಾಲೆಯ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್, ಸಮಾಲೋಚನಾ ಸಭೆಯ ಸಂಯೋಜಕರಾದ ಬೆಳಾಲು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಸಭೆಯ ಆಶಯದ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಶ್ರೀ ಧ ಮ ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ವಿದ್ಯಾಲಕ್ಷ್ಮಿ ಉಜಿರೆ, ಶ್ರೀಮತಿ ಹೇಮಲತಾ ಬೆಳ್ತಂಗಡಿ, ಪದ್ಮರಾಜ ಧರ್ಮಸ್ಥಳ, ಮುಕುಂದ ಚಂದ್ರ ಪೆರಿಂಜೆಯವರು ಉಪಸ್ಥಿತರಿದ್ದರು.

ಈಗಾಗಲೆ ವಿವಿಧ ವಿಷಯಗಳ ವೇದಿಕೆಯನ್ನು ರಚಿಸಲಾಗಿದ್ದು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಬೋಧಕ ಸಿಬ್ಬಂದಿಯವರನ್ನು ಒಳಗೊಳ್ಳಿಸಿ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.

Leave a Comment

error: Content is protected !!