ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಜ್ಯ ಶಾಸ್ತ್ರ ಸಂಘ , ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸಂಚಾರಿ ಪೋಲೀಸ್ ಠಾಣೆ ಬೆಳ್ತಂಗಡಿಯ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹ-2023ನೇ ಪ್ರಯುಕ್ತ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ ಅರ್ಜುನ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಸಂಚಾರಿ ನಿಯಮಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದರು.

ಯಾವೆಲ್ಲ ರೀತಿಯ ಸಂಚಾರಿ ನಿಯಮಗಳಿಗೆ, ಭಾರತೀಯ ಮೋಟಾರು ವಾಹನ ಕಾಯ್ದೆ, ಇನ್ಸೂರೆನ್ಸ್ ಹೆಲ್ಮೆಟ್ ಧಾರಣೆಯ ಮಹತ್ವ, ಸಂಚಾರಿ ನಿಯಮಗಳ ಪಾಲನೆಯಿಂದ ಆಗುವ ಲಾಭಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಒಂದು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಅಂತರ ಕಡಿಮೆಯಾಗಿ ಇಲಾಖೆಯ ಬಗ್ಗೆ ಯುವ ಜನರಲ್ಲಿ ತಪ್ಪು ಪೂರ್ವಾನುಗ್ರಹ ದೂರ ಮಾಡುವ ಒಂದು ಪ್ರಾಮಾಣಿಕ ಪ್ರಯತ್ನ ಈ ಜಾಗೃತಿ ಕಾರ್ಯಕ್ರಮದ ಮೂಲಕ ಮಾಡಲಾಯಿತು.

ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಎಎಸ್‍ಐ ರಾಮಚಂದ್ರ ಇವರು ಸಾರ್ವಜನಿಕರ ಜೀವವನ್ನು ರಕ್ಷಿಸುವಲ್ಲಿ ಸಂಚಾರಿ ನಿಯಮಗಳ ಪಾಲನೆಯ ಮಹತ್ವ ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಘವ ಎನ್. ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಹಿರಿಯ ಪ್ರಾಧ್ಯಾಪಕರು ಹಾಗೂ ಎನ್.ಎಸ್.ಎಸ್ ಸಲಹೆಗಾರರಾದ ಪ್ರೊ.ಸುಬ್ರಹ್ಮಣ್ಯ ಕೆ, ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯವರು ಉಪಸ್ಥಿತರಿದ್ದರು.

ಜಗದೀಶ್ ಪ್ರಾರ್ಥಿಸಿ, ಕು. ಪೂಜಾಶ್ರೀ ನಿರೂಪಿಸಿದರು. ಕು.ವರ್ಷಾ ಸ್ವಾಗತಿಸಿದರು, ಸಂದೇಶ್ ವಂದಿಸಿದರು.

Leave a Comment

error: Content is protected !!