ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಇಂದಬೆಟ್ಟು : ಕೇಂದ್ರ ಸರ್ಕಾರದ ಯೋಜನೆಗಳು ಕಚೇರಿಗಳಿಂದ ಹೊರಗೆ ಬಂದು ಫಲಾನುಭವಿಗಳನ್ನು ತಲುಪುವುದು ಮಾತ್ರವಲ್ಲ, ಅವರ ಮನೆಯ ಕದ ತಟ್ಟಬೇಕು ಎನ್ನುವ ಅಚಲ ಗುರಿಯೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವು ಇಂದಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಬೆಳ್ತಂಗಡಿ ಆರ್ಥಿಕ ಸಮಾಲೋಚಕರು ಶ್ರೀಮತಿ ಉಷಾ ನಾಯಕ್ ನೀಡಿದರು ಮತ್ತು ಯೋಜನೆಗಳ ಬಗ್ಗೆ ಜನರ ಅಹವಾಲುಗಳನ್ನು ಪಡೆದರು. ಕೆನರಾ ಬ್ಯಾಂಕ್ ಬೆಳ್ತಂಗಡಿಯ ಮುಖ್ಯ ಪ್ರಬಂಧಕರಾದ ಅಜಯ್ ರವರು ಮಾಹಿತಿ ನೀಡಿದರು ಮತ್ತು ಬಂಗಾಡಿ ಶಾಖೆಯ ಬಗ್ಗೆ ಜನರ ಸಮಸ್ಯೆಗಳನ್ನು ಆಲಿಸಿದರು ಮತ್ತು ಸಮಸ್ಯೆಯನ್ನು ಅದಷ್ಟು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿಯಾಗಿ ಬದುಕು ನಡೆಸುತ್ತಿರುವ ಇಬ್ಬರು ಮಹಿಳಾ ಫಲಾನುಭವಿಗಳು, ಇಬ್ಬರು ಕೃಷಿಕರು ಹಾಗೂ ಪೋಷನ್ ಕಾರ್ಯಕ್ರಮದಡಿ ಇಂದಬೆಟ್ಟುವಿನ 7 ಅಂಗನವಾಡಿಗಳ ತಲಾ ಇಬ್ಬರು ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು. ವಿಕಸಿತ ಯಾತ್ರೆಯ ರಥದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ LED ಟಿವಿಯಲ್ಲಿ ಬಿತ್ತರಿಸಲಾಯಿತು ಮತ್ತು ಪ್ರತಿಜ್ಞೆ ಭೋದಿಸಲಾಯಿತು. ಹೆಚ್.ಪಿ ಗ್ಯಾಸ್ ಏಜೆನ್ಸಿ ಉಜಿರೆ ಇವರು ಉಜ್ವಲ ಯೋಜನೆಯಡಿ ಫಲಾನುಭವಿಗಳ ನೋಂದಣಿ ಮಾಡಿದರು, ಪಂಚಾಯತ್ ಮಾಜಿ ಅಧ್ಯಕ್ಷರಾದ ಅನಂದ ಅಡಿಲು ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,

ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಶ್ರೀಮತಿ ಸುಮಿತ್ರಾ, ಶ್ರೀಮತಿ ಹರೀಣಾಕ್ಷಿ, ಶ್ರೀಮತಿ ಜಯಂತಿ, ವೀರಪ್ಪ ಮೊಯ್ಲಿ, ಪಂ. ಕಾರ್ಯದರ್ಶಿ ಗಿರಿಯಪ್ಪ ಗೌಡ ಮತ್ತು ಸಿಬ್ಬಂದಿ ವರ್ಗದವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನು ಪಡೆದುಕೊಂಡರು.

Leave a Comment

error: Content is protected !!