ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಕುಕ್ಕಳ – ಮಡಂತ್ಯಾರು ಗ್ರಾಮ ಸಮಿತಿ ರಚನೆ

Suddi Udaya

ಮಡಂತ್ಯಾರು : ಆದಿದ್ರಾವಿಡ ಸಮಾಜ ಸೇವಾ ಸಂಘ ತಾಲೂಕು ಘಟಕ ಬೆಳ್ತಂಗಡಿ, ಇದರ ಆಶ್ರಯದಲ್ಲಿ, ಕುಕ್ಕಳ – ಮಡಂತ್ಯಾರು ಗ್ರಾಮ ಸಮಿತಿಯು ಡಿ..17 ರಂದು ಆನಂದ ಅಟ್ಟತ್ತೋಡಿ ಇವರ ಮನೆಯಲ್ಲಿ ತಾಲೂಕು ಘಟಕದ ಅಧ್ಯಕ್ಷರಾದ ದಿನೇಶ್ ಕೆ ಕೊಕ್ಕಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕುಮಾರಿ ಸುಶ್ಮಿತಾ, ಕುಮಾರಿ ನಿಶ್ಮಿತಾ, ಕುಮಾರಿ ಸುಕನ್ಯಾ ಇವರು ಪ್ರಾರ್ಥನೆಯನ್ನು ಹಾಡಿದರು. ಕುಮಾರಿ ರಂಜಿನಿ ಇವರು ಅತಿಥಿಗಳನ್ನು ಸ್ವಾಗತಿಸಿದರು. ದೀಪ ಬೆಳಗಿಸಿ, ಡಾ|| ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವುದರ ಮೂಲಕ ಸಭೆಯನ್ನು ಆರಂಭಿಸಲಾಯಿತು.

ಗೋಪಾಲ ಕೃಷ್ಣ ಕುಕ್ಕಳ ಮಾತಾನಾಡುತ್ತಾ ಆದಿದ್ರಾವಿಡ ಸಮುದಾಯ ಪದದ ಹುಟ್ಟು ಬೆಳವಣಿಗೆಯನ್ನು ವಿವರಿಸುತ್ತಾ, ನಮ್ಮ ಕುಲದೇವರಾದ ಶ್ರೀ ಕಾನದ-ಕಟದರ ಬದುಕು, ಪರಿಶ್ರಮ, ತ್ಯಾಗಗಳು ನಮಗೆ ಆದರ್ಶ ಮತ್ತು ಪ್ರೇರಣೆ. ಆ ನಿಟ್ಟಿನಲ್ಲಿ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು, ಹಾಗೂ ನಮ್ಮ ಸಮುದಾಯಕ್ಕೆ ಆಗುವ ದೈಹಿಕ, ಮಾನಸಿಕ ದಾಳಿಯನ್ನು ಎದುರಿಸಲು ಜಾತಿ ಸಂಘಟನೆಯನ್ನು ಗಟ್ಟಿಗೊಳಿಸುವ ಅನಿವಾರ್ಯತೆ ಇದೆ ಎಂದರು.
ತಾಲೂಕಿನ ನಿಕಟಪೂರ್ವ ಉಪಾಧ್ಯಕ್ಷರಾದ ಲಕ್ಷ್ಮಣ ಜಿ.ಎಸ್ ಮಾತನಾಡುತ್ತಾ ನಮ್ಮ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಾಗೂ ಜೀವನ ಶೈಲಿ ಕೂಡ ಈ ಹಿಂದೆ ಅತ್ಯಂತ ತಳಮಟ್ಟದಲ್ಲಿತ್ತು, ನಾವೆಲ್ಲರೂ ಈ ಸಂಘಟನೆಯ ಮೂಲಕ ಒಟ್ಟಾಗಿ ಮುಂದುವರಿದ ಇತರ ಸಮುದಾಯಗಳಂತೆ ನಾವೂ ಕೂಡ ಶೈಕ್ಷಣಿಕ, ಸಾಮಾಜಿಕ ಆರ್ಥಿಕವಾಗಿ ಹಾಗೂ ನಮ್ಮ ಜೀವನ ಶೈಲಿಕೂಡ ಧನಾತ್ಮಕವಾಗಿ ಬದಲಾಗಬೇಕಾಗಿದೆ. ಡಾ|| ಬಿ.ಆರ್.ಅಂಬೇಡ್ಕರ್ ಹಾಗೂ ಕುಲದೇವರಾದ ಕಾನದ-ಕಟದರ ಸಾಹಸ, ಸಾಧನೆಗಳನ್ನು ವಿವರಿಸುತ್ತಾ ಅವರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ತಾಲೂಕು ಘಟಕದ ಅಧ್ಯಕ್ಷರಾದ ದಿನೇಶ್ ಕೆ ಕೊಕ್ಕಡ ಮಾತನಾಡುತ್ತಾ, ಡಿ.24 ರಂದು ಮಂಗಳೂರಿನ ಪುರಭವನದಲ್ಲಿ ನಡೆಯುವ ಆದಿದ್ರಾವಿಡ ಸಮುದಾಯದ ರಾಜ್ಯ ಸಮಾವೇಶದ ಯಶಸ್ಸಿಗೆ ಎಲ್ಲರೂ ಸಹಕರಿಸುವ ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಗ್ರಾಮದ ಜಾತಿಬಾಂಧವರ ಜೊತೆ ಉತ್ತಮ ಭಾಂದವ್ಯ ಬೆಳೆಸಿಕೊಂಡು ಸಮುದಾಯಕ್ಕೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಾದರಿ ಗ್ರಾಮ ಸಮಿತಿಯಾಗಿ ರೂಪುಗೊಳ್ಳಲಿ ಎಂದು ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.) ಬೆಳ್ತಂಗಡಿಯ ಕುಕ್ಕಳ-ಮಡಂತ್ಯಾರು ಗ್ರಾಮ ಸಮಿತಿಗೆ ನೂತನ ಅಧ್ಯಕ್ಷರಾಗಿ ಆನಂದ ಅಟ್ಟತ್ತೋಡಿ, ಉಪಾಧ್ಯಕ್ಷರಾಗಿ ಪೂರ್ಣೆಶ, ಕಾರ್ಯದರ್ಶಿಯಾಗಿ ಕುಮಾರಿ ರಂಜಿನಿ, ಜೊತೆಕಾರ್ಯದರ್ಶಿಯಾಗಿ ಆನಂದ ಬೆರ್ಕಳ, ಕೋಶಾಧಿಕಾರಿಯಾಗಿ ನವೀನ್ ಆಯ್ಕೆಯಾದರು.

ಸಭೆಯಲ್ಲಿ ತಾಲೂಕು ಘಟಕದ ಉಪಧ್ಯಾಕ್ಷರಾದ ರಾಮು ಪಡಂಗಡಿ, ಜೊತೆಕಾರ್ಯದರ್ಶಿಯಾದ ಶಿವಕುಮಾರ್, ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಗೋಪಾಲ ಕೃಷ್ಣ ಕುಕ್ಕಳ, ಉಪಾಧ್ಯಕ್ಷರಾದ ಲಕ್ಷ್ಮಣ್ ಜಿ.ಎಸ್, ಮುಂತಾದವರು ಉಪಸ್ಥಿತರಿದ್ದರು. ಪ್ರಜ್ವಲ್ ಧನ್ಯವಾದವಿತ್ತರು.

Leave a Comment

error: Content is protected !!