ವೇಣೂರು ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ವೇಣೂರು: ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರ ಪರಿಕಲ್ಪನೆಯ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಡಿ.20 ರಂದು ವೇಣೂರು ಗ್ರಾಮ ಪಂಚಾಯತ್ ಗೆ ಆಗಮಿಸಿತು. ರಥ ಯಾತ್ರೆಯನ್ನು ಚೆಂಡೆ ವಾದನದೊಂದಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಊರ ಪ್ರಮುಖರು, ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತಿಸಿದರು. ನಂತರ ನೂತನ ಬಸ್ ನಿಲ್ದಾಣದ ಮೇಲ್ಭಾಗದ ಪಂಚಾಯತ್ ಸಭಾ ಭವನದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಭಾ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೇಮಯ್ಯ ಕುಲಾಲ್ ರವರು ವಹಿಸಿದ್ದರು.

ದಿಕ್ಸೂಚಿ ಭಾಷಣಕಾರರಾಗಿ ಯುವ ವಾಗ್ಮಿ ಸುನಿಲ್ ಪಣಪಿಲ ಭಾಗವವಹಿಸಿ ಪ್ರಧಾನಿ ನರೇಂದ್ರ ಮೋದಿಜಿಯವರ ಸಾಧನೆಗಳು-ಯೋಚನೆಗಳು ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಬೆಳ್ತಂಗಡಿ ಸಾಕ್ಷರತಾ ಆರ್ಥಿಕಾ ಸಮಿತಿ ಸಂಯೋಜಕರಾದ ಶ್ರೀಮತಿ ಉಷಾ ನಾಯಕ್ ರವರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಿ ಎಲ್ಲರೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಪಡೆದು ಫಲಾನುಭವಿಗಳಾಗಿ ಭಾರತದ ವಿಕಾಸಕ್ಕೆ ಸಹಕರಿಸಬೇಕೆಂದು ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದ ಕೃಷಿ ವಿಜ್ಞಾನ ಕೇಂದ್ರದ ಡಾ.ಸೌಮ್ಯ ರೆಡ್ಡಿಯವರು ಕೃಷಿಗೆ ಸಂಬಂಧಪಟ್ಟ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿಇ, ವೇಣೂರು ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರಾದ ಅಲೋಕ್ ಕೃಷ್ಣಯ್ಯ, ವೇಣೂರು ಗ್ರಾ.ಪಂ. ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪಾ, ಗ್ರಾ.ಪಂ ಕಾರ್ಯದರ್ಶಿ ಶ್ರೀಮತಿ ವನಜಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇಣೂರು ಗ್ರಾಮ ಪಂಚಾಯತ್ ನ ಸದಸ್ಯರುಗಳು,ಸಿಬ್ಬಂದಿ ವರ್ಗದವರು,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ವಿವಿಧ ಇಲಾಖೆಯ ಪದಾಧಿಕಾರಿಗಳು,ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ವೇಣೂರು ಗ್ರಾ.ಪಂ ಸದಸ್ಯರಾದ ಅರುಣ್ ಕ್ರಾಸ್ತಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಗಣ್ಯರನ್ನು ಹಾಗೂ ಸಮಾಜ ಬಂಧುಗಳನ್ನು ಸ್ವಾಗತಿಸಿದರು.ಗ್ರಾಮ ಪಂಚಾಯತ್ ಸಿಬ್ಬಂದಿ ನಾರಾಯಣ ಗೌಡ ಧನ್ಯವಾದಗೈದರು. ಗ್ರಾಮ ಪಂಚಾಯತ್ ಸದಸ್ಯರಾದ ಲೋಕಯ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಿಕಸಿತ ಭಾರತ ಸಂಕಲ್ಪ ಯಾತ್ರೆ ವೇಣೂರು ಗ್ರಾಮ ಪಂಚಾಯತ್ ನ ಪ್ರಭಾರಿ ಅಭಿಜಿತ್ ಜೈನ್ ಕಾರ್ಯಕ್ರಮ ಸಂಯೋಜಿಸಿ ಸಹಕರಿಸಿದರು.

ಗೌರವ ಸಮ್ಮಾನ: ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾವಯವ ಕೃಷಿಕ ಸುಂದರ ಹೆಗ್ಡೆ ಮೂಡುಕೋಡಿ, ಹೈನುಗಾರಿಕೆಯ ಸಾಧಕಿ ಶ್ರೀಮತಿ ರೇವತಿ ಗೌಡ, ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿ = ಹರೀಶ್ ಕರಿಮಣೇಲು ಮತ್ತು ಮುದ್ರಾ ಯೋಜನೆಯ ಫಲಾನುಭವಿ ಶಿವಾನಂದ ಪೂಜಾರಿ ಇವರುಗಳನ್ನು ಕೆನರಾ ಬ್ಯಾಂಕ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಪೋಷಣ್ ಯೋಜನೆ ಅಡಿಯಲ್ಲಿ ಅಂಗನವಾಡಿಯ ಆರೋಗ್ಯವಂತ 2 ಶಿಶುಗಳಿಗೆ ವಿಶೇಷ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.

Leave a Comment

error: Content is protected !!