ಎಸ್.ಡಿ.ಎಂ. ಬಿ.ಎಡ್ , ಡಿ.ಇಎಲ್.ಇಡಿ ಹಾಗೂ ಶ್ರೀ ಧ.ಮಂ. ಮಹಿಳಾ ಐಟಿಐ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಕ್ರೀಡಾಕೂಟ

Suddi Udaya

ಉಜಿರೆ: ಜೀವನದಲ್ಲಿ ಉತ್ಸಾಹ ಮತ್ತು ಯಶಸ್ಸನ್ನು ಕಾಣಲು ಪಠ್ಯ ಚಟುವಟಿಕೆಗಳ ಜೊತೆ ಜೊತೆಗೆ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆ ಅತಿ ಅಗತ್ಯ ಎಂದು ಉಜಿರೆಯ ಮಂಜುಶ್ರೀ ಪ್ರಿಂಟಿಂಗ್ ಪ್ರೆಸ್ ಪ್ರಬಂಧಕ ಶೇಖರ್ ಟಿ. ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಎಸ್.ಡಿ.ಎಂ. ಬಿ.ಎಡ್.), ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆ (ಎಸ್.ಡಿ.ಎಂ. ಡಿ.ಇಎಲ್.ಇಡಿ.) ಹಾಗೂ ಶ್ರೀ ಧ.ಮಂ. ಮಹಿಳಾ ಐಟಿಐ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಲಾದ ಕ್ರೀಡಾಕೂಟವನ್ನು ಧ್ವಜಾರೋಹಣಗೈದು ಉದ್ಘಾಟಿಸಿ ಅವರು ಮಾತನಾಡಿದರು.

“ಬೆಳಗ್ಗೆ ಆಡುವುದರಿಂದ ಮೈ ಹಗುರವಾಗಿ ಉಲ್ಲಾಸ, ಉತ್ಸಾಹ ಸಿಗುತ್ತದೆ. ಜೀವನದಲ್ಲಿ ಸಂಭವಿಸಬಹುದಾದ ಅನೇಕ ಕಾಯಿಲೆಗಳನ್ನು ಬರದಂತೆ ತಡೆಯಲು ಕ್ರೀಡೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಕ್ರೀಡಾಸ್ಪರ್ಧೆಗಳಲ್ಲಿ ಪ್ರಶಸ್ತಿಗಿಂತಲೂ ಭಾಗವಹಿಸುವುದು ಮುಖ್ಯ. ಗೆದ್ದವರನ್ನು ಅಭಿನಂದಿಸಿ ಮುಂದೆ ನಾವು ಗೆಲ್ಲುವುದಕ್ಕಾಗಿ ಪ್ರಯತ್ನ ಮುಂದುವರಿಸಬೇಕು” ಎಂದು ಅವರು ಸಲಹೆ ನೀಡಿದರು.

ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆ (ರಿ.)ಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಉಜಿರೆಯ ಈ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಅನೇಕ ಕ್ರೀಡಾ ಸಾಧಕರನ್ನು ತಯಾರು ಮಾಡಿದೆ. ವಿದ್ಯಾರ್ಥಿಗಳು ಇಲ್ಲಿಂದ ಸ್ಫೂರ್ತಿ ಪಡೆದು, ಸಾಧಕರಾಗಿ ಹೊರಹೊಮ್ಮಿ” ಎಂದು ಆಶಿಸಿದರು. .ಡಿ.ಎಂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುದೀನ, ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಚಾರ್ಯ ಸ್ವಾಮಿ ಕೆ.ಎ. ಉಪಸ್ಥಿತರಿದ್ದರು. ಬಿ.ಎಡ್. ಪ್ರಶಿಕ್ಷಣಾರ್ಥಿಗಳಾದ ಕಾವ್ಯಶ್ರೀ ಪ್ರಮಾಣವಚನ ಬೋಧಿಸಿ, ಇಶ್ರತ್ ಕಾರ್ಯಕ್ರಮ ನಿರೂಪಿಸಿದರು. ಎಸ್ ಡಿ ಎಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಸಂತೋಷ್ ಸಲ್ದಾನ ಸ್ವಾಗತಿಸಿದರು. ಎಸ್ ಡಿ ಎಂ ಮಹಿಳಾ ಐಟಿಐ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್ ವಂದಿಸಿದರು.

Leave a Comment

error: Content is protected !!