ಮುಂಡಾಜೆ : ಸಂವಿಧಾನ ಜಾಗೃತಿ ಜಾಥಾ

Suddi Udaya

ಮುಂಡಾಜೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಬೆಳ್ತಂಗಡಿ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಮುಂಡಾಜೆ ಇವರ ಜಂಟಿ ಆಶ್ರಯದಲ್ಲಿ ಫೆ.15 ರಂದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ನಡೆದಿದ್ದು ಸಂವಿಧಾನ ರಥವನ್ನು ಸೋಮಂತಡ್ಕ ಪೇಟೆ ಬಳಿಯಿಂದ ಪೂರ್ಣ ಕುಂಭ ಸ್ವಾಗತ , ಬೈಕ್ ರ್‍ಯಾಲಿ , ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿವರ್ಗ, ನರೇಗಾ ತಾಲೂಕು ಐಇಸಿ ಸಂಯೋಜಕರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತರು , ಸಂಜೀವಿನಿ ಒಕ್ಕೂಟದ ಎಮ್ ಬಿ ಕೆ, ಎಲ್ ಸಿ ಆರ್ ಪಿ, ಸ್ವಸಹಾಯ ಸಂಘದ ಸದಸ್ಯರು, ಸಮುದಾಯ ಆರೋಗ್ಯ ಅಧಿಕಾರಿ, ಸರಕಾರಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಿದರು.

ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರು ,ಉಪಾಧ್ಯಕ್ಷರು, ಸರ್ವಸದಸ್ಯರು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸಿದರು ಮತ್ತು ಸಂವಿಧಾನ ಪೀಠಿಕೆಯನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿ ಗಾಯತ್ರಿ ಪಿ ಇವರು ಭೋಧನೆ ಮಾಡಿದರು. ಭಾರತ ಸಂವಿಧಾನದ ಕುರಿತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಿರಿಯ ಉಪನ್ಯಾಸಕರು, ಸಾಹಿತಿಗಳು ಆದ ಅರವಿಂದ ಚೊಕ್ಕಾಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂವಿಧಾನ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಮಂಗಳೂರಿನ ಕಲಾ ತಂಡದಿಂದ ಸಂವಿಧಾನ ಜಾಗೃತಿ ಕುರಿತು ಗೀತಾ ಗಾಯನ ಹಾಗೂ ಪ್ರಹಸನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನಿರೂಪಿಸಿ, ಸ್ವಾಗತಿಸಿ, ಧನ್ಯವಾದ ನೀಡಿದರು. ಕಾರ್ಯಕ್ರಮದ ಯಶಸ್ವಿಗೆ ಸಿಬ್ಬಂದಿಗಳು ಸಹಕರಿಸಿದರು.

Leave a Comment

error: Content is protected !!