ಬೆಳ್ತಂಗಡಿ: ತಣ್ಣೀರುಪಂತದಲ್ಲಿ ಮನೆ ಸಮೀಪದ ಅಡಿಕೆ ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ರೂ. 1.35ಲಕ್ಷ ಮೌಲ್ಯದ ಅಡಿಕೆ ಕಳ್ಳತನ ಮಾಡಿದ ಘಟನೆ ಸಂಭವಿಸಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಣ್ಣೀರುಪಂತ ನಿವಾಸಿ ಅಬ್ದುಲ್ ಹಕ್ಕೀಂ ಈ ಬಗ್ಗೆ ದೂರು ನೀಡಿದ್ದು ಎ.2ರಂದು ಸಂಜೆಯ ವೇಳೆ ಸುಲಿಯದ ಅಡಿಕೆಯನ್ನು 75 ಗೋಣಿ ಚೀಲಗಳಲ್ಲಿ ತುಂಬಿಸಿ ಗೋದಾಮಿನಲ್ಲಿ ಇಟ್ಟು ಬೀಗ ಹಾಕಿದ್ದರು. ಎ. 3 ರಂದು ಬೆಳಿಗ್ಗೆ ನೋಡಿದಾಗ ಗೋದಾಮಿನ ಬೀಗ ಬಾಗಿಲು ತುಂಡಾಗಿ ಬಿದ್ದಿರುವುದು ಕಂಡು ಬಂದಿದ್ದು ಪರಿಶೀಲಿಸಿದಾಗ ಅಲ್ಲಿ ಇರಿಸಲಾಗಿದ್ದ 25ಅಡಿಕೆ ಚೀಲಗಳನ್ನು ಕಳ್ಳತನ ಮಾಡಿರುವುದು ಕಂಡು ಬಂದಿದೆ. ಕಳ್ಳತನವಾಗಿರುವ ಅಡಿಕೆಯ ಒಟ್ಟು ಮೌಲ್ಯ 1,35,000 ಎಂದು ಅಂದಾಜಿಸಲಾಗಿದೆ.
ಅಡಿಕೆ ಗೋದಾಮಿನ ಬಗ್ಗೆ ಮಾಹಿತಿಯಿರುವ ಸ್ಥಳೀಯರ ಸಹಕಾರದೊಂದಿಗೆ ಈ ಕಳ್ಳತನ ನಡೆದಿದೆ ಎಂದು ಅನುಮಾನಿಸಲಾಗಿದೆ. ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.













